ಹೈದರಾಬಾದ್: ಬಡ ತರಕಾರಿ ವ್ಯಾಪಾರಿ ಕಷ್ಟಪಟ್ಟು ದುಡಿದ ಹಣವನ್ನು ತಮ್ಮ ಆಪರೇಷನ್ಗೆಂದು ಕೂಡಿಟ್ಟಿದ್ದರು. ಆದರೆ ಇಲಿಗಳು ಸುಮಾರು 2 ಲಕ್ಷ ರೂ.ಗಳನ್ನು ಕಚ್ಚಿ ಹಾಳು ಮಾಡಿದ್ದವು. ಇದರಿಂದ ಆಘಾತಕ್ಕೊಳಗಾದ ವ್ಯಾಪಾರಿ ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದರು. ಬಳಿಕ ಅಚ್ಚರಿ ರೀತಿಯಲ್ಲಿ ಅವರ ಶಸ್ತ್ರಚಿಕಿತ್ಸೆಗೆ ಸಹಾಯ ದೊರೆತಿದೆ.
ತೆಲಂಗಾಣದ ಮೆಹಬೂಬಬಾದ್ ವೇಮನೂರ್ ಗ್ರಾಮದ ರೆದ್ಯಾ ನಾಯಕ್ ಅವರು ತಿಂಗಳುಗಟ್ಟಲೇ ಕಷ್ಟಪಟ್ಟು ದುಡಿದು ಕಿಬ್ಬೊಟ್ಟೆ ಚಿಕಿತ್ಸೆಗಾಗಿ 2 ಲಕ್ಷ ರೂ.ಗಳನ್ನು ಸಂಗ್ರಹಿಸಿಟ್ಟಿದ್ದರು. ನಾಲ್ಕು ವರ್ಷಗಳ ಹಿಂದೆ ಇವರಿಗೆ ಕಿಬ್ಬೊಟ್ಟೆಯ ಗಡ್ಡೆ ಕಾಣಿಸಿಕೊಂಡಿತ್ತು. ಆಗಿನಿಂದ ಶಸ್ತ್ರಚಿಕಿತ್ಸೆಗಾಗಿ ನಿತ್ಯ ಹಣವನ್ನು ಕೂಡಿಡುತ್ತ ಬಂದಿದ್ದರು.
तेलंगाना में एक चूहे ने एक बुजुर्ग शख़्स के चार लाख रुपये के नोट तबाह कर दिए. ये पैसे उन्होंने अपने इलाज के लिए जमा किए थे… pic.twitter.com/6VXhGEkXAg
— BBC News Hindi (@BBCHindi) July 22, 2021
ಬಳಿಕ ಆಪರೇಷನ್ ದಿನದಂದು ನೋಟುಗಳನ್ನು ಸಂಗ್ರಹಿಸಿಟ್ಟಿದ್ದ ಕಾಟನ್ ಬ್ಯಾಗ್ನ್ನು ಅಲ್ಮೆರಾದಿಂದ ಹೊರ ತೆಗೆದಿದ್ದು, ಈ ವೇಳೆ ಇಲಿಗಳು ನೋಟುಗಳನ್ನು ಹಾಳು ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನು ಕಂಡ ತರಕಾರಿ ವ್ಯಾಪಾರಿಗೆ ತಲೆ ಮೇಲೆ ಆಕಾಶ ಕಳಚಿ ಬಿದ್ದಂತಾಗಿದೆ. ಹೇಗೋ ಬೀರು ಒಳಗೆ ನುಗ್ಗಿದ್ದ ಇಲಿಗಳು ನೋಟುಗಳನ್ನು ಹಾಳು ಮಾಡಿದ್ದವು.
ಇದರಿಂದ ಆತಂಕಕ್ಕೊಳಗಾದ ನಾಯಕ್ ಅವರು, ಹಲವು ಸ್ಥಳೀಯ ಬ್ಯಾಂಕ್ಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆದರೆ ಬ್ಯಾಂಕ್ನವರು ನೋಟುಗಳು ಹಾಳಾಗಿವೆ. ಇವುಗಳನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇದಕ್ಕೆ ಪರಿಹಾರ ಕಂಡುಕೊಳ್ಳಲು ತರಕಾರಿ ವ್ಯಾಪಾರಿ ಹೋರಾಟ ನಡೆಸುತ್ತಿರುವಾಗಲೇ ಈ ವಿಷಯ ತೆಲಂಗಾಣದ ಬುಡಕಟ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸತ್ಯವತಿ ರಾಠೋಡ್ ಅವರ ಗಮನಕ್ಕೆ ಬರುತ್ತದೆ. ತಕ್ಷಣ ಎಚ್ಚೆತ್ತ ಸಚಿವರು, ಮಹಬೂಬಬಾದ್ ಡಿಸಿಯವರೊಂದಿಗೆ ನಾಯಕ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ಆಸ್ಪತ್ರೆ ಸೇರಿದಂತೆ ಶಸ್ತ್ರಚಿಕಿತ್ಸೆ ಬೇಕಾಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.