ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಇದೀಗ ಮೇಯರ್-ಉಪಮೇಯರ್ ಆಯ್ಕೆಗೆ ಕಸರತ್ತು ನಡೆದಿದೆ. ಈ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅಜ್ಞಾತ ಸ್ಥಳಕ್ಕೆ ತೆರಳಿದ್ದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶನಿವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಸಚಿವ ಗೋವಿಂದ ಕಾರಜೋಳ, ಶಾಸಕ ಅಭಯ್ ಪಾಟೀಲ್ ಅವರ ಜೊತೆಗೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಗನ್ ಮ್ಯಾನ್, ಪಿಎಗಳನ್ನು ಸರ್ಕ್ಯೂಟ್ ಹೌಸ್ನಲ್ಲೇ ಬಿಟ್ಟು, ಎಸ್ಕಾರ್ಟ್ ಇಲ್ಲದೇ ತೆರಳಿದ್ದಾರೆ. ಅಭಯ್ ಪಾಟೀಲ್ ಕಾರ್ ಡ್ರೈವ್ ಮಾಡಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆದುಕೊಂಡು ಹೋಗಿದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆ ಮೂಡಿದೆ.
ರಹಸ್ಯ ಸ್ಥಳದಲ್ಲಿ ಮೇಯರ್ ಮತ್ತು ಉಪಮೇಯರ್ ಯಾರನ್ನು ಮಾಡಬೇಕು ಎಂಬ ಬಗ್ಗೆ ಅಭಯ್ ಪಾಟೀಲ್ ಜೊತೆಗೆ ಗೋವಿಂದ ಕಾರಜೋಳ ಚರ್ಚೆ ನಡೆಸಿದ್ದಾರೆ. ಅಂತಿಮವಾಗಿ ಅಭಯ್ ಪಾಟೀಲ್ ಯಾರನ್ನು ಸೂಚಿಸುತ್ತಾರೋ ಅವರೇ ಮೇಯರ್ ಮತ್ತು ಉಪಮೇಯರ್ ಆಯ್ಕೆ ಆಗುತ್ತಾರೆ ಎನ್ನಲಾಗುತ್ತಿದೆ.