ಬೆಂಗಳೂರು: ಇನ್ಮುಂದೆ ಸೀಲ್ಡೌನ್ ಮಾಡಲ್ಲ ಎಂದಿದ್ದ ಬಿಬಿಎಂಪಿ ಅಪಾರ್ಟ್ಮೆಂಟನ್ನೇ ಸೀಲ್ಡೌನ್ ಮಾಡುವ ಮೂಲಕ ಮತ್ತೆ ಎಡವಟ್ಟು ಮಾಡಿದೆ.
ಬಿಬಿಎಂಪಿ ಬೆಂಗಳೂರಿನ ಸಹಕಾರ ನಗರದಲ್ಲಿರುವ ಇಡೀ ಅಪಾರ್ಟ್ಮೆಂಟ್ ಒಂದನ್ನು ಸೀಲ್ಡೌನ್ ಮಾಡಿದೆ. ಹೊರಗೆ ಹೋಗದಂತೆ ಕಬ್ಬಿಣದ ಪಟ್ಟಿ ಹಾಕಿದೆ. ಇದರಿಂದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹಾಲು, ತರಕಾರಿ ಏನೂ ಸಿಗುತ್ತಿಲ್ಲ. ಇದೀಗ ಬಿಬಿಎಂಪಿಯ ನಿರ್ಧಾರದಿಂದ ಜನರು ಆಕ್ರೋಶಗೊಂಡಿದ್ದಾರೆ.
ಕಳೆದ ಮೂರು ದಿನದ ಹಿಂದೆ ಅಪಾರ್ಟ್ಮೆಂಟ್ನಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ 13 ಮಂದಿಗೆ ಸೋಂಕು ಪತ್ತೆಯಾಗಿತ್ತು. ಹೀಗಾಗಿ 13 ಮಂದಿಯನ್ನ ಹೋಂ ಐಸೋಲೇಷನ್ ಮಾಡಲಾಗಿದೆ. ಆದರೆ ಬಿಬಿಎಂಪಿ ಇಡೀ ಅಪಾರ್ಟ್ಮೆಂಟನ್ನೇ ಸೀಲ್ಡೌನ್ ಮಾಡಿದೆ. ಸೋಂಕಿತರ ನಿವಾಸಕ್ಕೆ ಸ್ಟಿಕರ್ ಹಾಕಿ ಆ ಮನೆಯವರನ್ನ ಮಾತ್ರ ಲಾಕ್ ಮಾಡಬೇಕು. ಆದರೆ ಬಿಬಿಎಂಪಿ ಅಧಿಕಾರಿಗಳು ಇಲ್ಲಿ ಅಪಾರ್ಟ್ಮೆಂಟ್ ಗೇಟ್ ಅನ್ನೇ ಲಾಕ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಯಾರು ಸಹ ಹೊರಕ್ಕೆ ಮತ್ತು ಒಳಕ್ಕೆ ಬಾರದಂತೆ ನಿರ್ಬಂಧ ಹಾಕಿದ್ದಾರೆ.
ಆಗತ್ಯ ವಸ್ತುಗಳನ್ನ ತರಲು ಹೊರಕ್ಕೆ ಬಿಡುತ್ತಿಲ್ಲ. ಹಾಲು, ನೀರು, ತರಕಾರಿಯವನ್ನು ಸಹ ತರಲು ಬಿಡುತ್ತಿಲ್ಲ. ಇಡೀ ಅಪಾರ್ಟ್ಮೆಂಟ್ನಲ್ಲಿ 500 ಜನ ಇದ್ದೇವೆ. ಈ ರೀತಿ ಇಡೀ ಅಪಾರ್ಟ್ಮೆಂಟ್ ಸೀಲ್ ಮಾಡಿದ್ದಾರೆ. ಅಮೃತಹಳ್ಳಿ ಬಿಬಿಎಂಪಿ ವ್ಯಾಪ್ತಿಗೆ ಬರುವ ಅಪಾರ್ಟ್ಮೆಂಟ್ ಇದಾಗಿದೆ. ಶನಿವಾರ ಸಂಜೆಯಿಂದ ಮನೆಯಿಂದ ಹೊರಕ್ಕೆ ಬರದಂತೆ ನಿಷೇಧ ಮಾಡಿದ್ದಾರೆ. ನಾವೇಲ್ಲ ಹೇಗೆ ಜೀವನ ಮಾಡೋದು ಅಂತ ಅಪಾರ್ಟ್ಮೆಂಟ್ ನಿವಾಸಿಗಳು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.