ಗದಗ: ಭೂ ಕುಸಿತದಿಂದ ಮನೆಯ ಒಳಾಂಗ ಕುಸಿತವಾಗಿ ಮಣ್ಣಿನ ಅವಶೇಷದಡಿ ಸಿಲುಕಿ ನರಳಾಡಿದ್ದ ಬಾಲಕಿಯ ರಕ್ಷಣೆ ಮಾಡಿರುವ ಘಟನೆ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕುರಬಗೇರಿ ಪ್ರದೇಶದ ನಿಂಗಪ್ಪ ನುಗ್ಗಾನಟ್ಟಿ ಎಂಬುವರ ಮನೆಯಲ್ಲಿ ಭೂಕುಸಿತವಾಗಿ, ಸ್ವಲ್ಪ ಭಾಗ ಮನೆಯ ಒಳಾಂಗಣ ಸಹ ಕುಸಿದಿದೆ. ಈ ವೇಳೆ ಮನೆಯ ಮುಂಗಾದಲ್ಲಿದ್ದ 14 ವರ್ಷದ ಕಾವ್ಯಾ ನುಗ್ಗಾನಟ್ಟಿ ಮಣ್ಣಿನ ಅವಶೇಷಗಳಡಿ ಸಿಲುಕಿ ಸುಮಾರು ಎರಡು ಗಂಟೆ ನರಳಾಡಿದ್ದಳು.
ಮನೆ ಕುಸಿದ ತಕ್ಷಣ ಬಾಲಕಿಯ ರಕ್ಷಣೆಗೆ ಕಾರ್ಯಪ್ರವೃತ್ತರಾದ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ಬಾಲಕಿಯ ಮೇಲೆ ಬಿದ್ದ ಕಲ್ಲು, ಮಣ್ಣು, ಕಟ್ಟಿಗೆಗಳನ್ನ ತೆರುವುಗೊಳಿಸಿ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಬಾಲಕಿ ಕಾವ್ಯಾ ಬದುಕುಳಿದಿದ್ದಾಳೆ. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ನರಗುಂದ ಪಟ್ಟಣದಲ್ಲಿ ಪದೇ ಪದೇ ಭೂ ಕುಸಿತದ ಅನೇಕ ದುರ್ಘಟನೆಗಳು ಸಂಭವಿಸುತ್ತಲೇ ಇವೆ. ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅಂತರ್ಜಲ ಹೆಚ್ಚಳದಿಂದ ಪದೇ ಪದೇ ಭೂಕುಸಿತವಾಗುತ್ತಿದೆ ಎನ್ನುವ ಕಾರಣ ಒಂದಾದರೆ, ನರಗುಂದ ಬಾಬಾಸಾಹೇಬ್ ಆಳ್ವಿಕೆಯ ಸುರಂಗ ಮಾರ್ಗಗಳಿದ್ದವು ಮತ್ತು ದವಸ-ಧಾನ್ಯಗಳನ್ನು ಸಂಗ್ರಹಿಸಿಡಲು ಕಣಿಜಗಳಿದ್ದವು ಎನ್ನಲಾಗುತ್ತಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಸಿ.ಸಿ ಪಾಟೀಲ್ ತವರಲ್ಲೆ ಭೂಕುಸಿತ ಆಗುತ್ತಿದ್ದರೂ ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.