ಡೆಹರಡೂನ್: ಪ್ರವಾಹ ವೀಕ್ಷಣೆಗೆ ತೆರಳಿದ ಕಾಂಗ್ರೆಸ್ ಶಾಸಕರೊಬ್ಬರು ಕಾಲು ಜಾರಿ ತೊರೆಯೊಳಗೆ ಬಿದ್ದಿರುವ ಘಟನೆ ನೇಪಾಳ ಗಡಿ ಸಮೀಪದ ಪಿತ್ತೋರ್ಗಢದ ಧಾರ್ಚಾಲ್ ಪ್ರದೇಶದಲ್ಲಿ ನಡೆದಿದೆ.
ಉತ್ತರಖಂಡದ ಕಾಂಗ್ರೆಸ್ ಶಾಸಕ ಹರೀಶ್ ಧಾಮಿ ಅವರು, ಮಳೆಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ವಾಪಸ್ ಬರುತ್ತಿರುವಾಗ ಈ ಘಟನೆ ನಡೆದಿದೆ. ಕಾಲು ಜಾರಿ ತೊರೆಯೊಳಗೆ ಬಿದ್ದಿದ್ದಾರೆ. ನಂತರ ಸ್ವಲ್ಪ ದೂರ ನೀರಿನಲ್ಲಿ ತೇಲಿಕೊಂಡು ಹೋಗಿದ್ದಾರೆ. ಆದರೆ ತಕ್ಷಣ ಜೊತೆಗಿದ್ದ ಬೆಂಬಲಿಗರು ಅವರನ್ನು ನೀರಿನಿಂದ ಮೇಲೆ ಎತ್ತಿ ರಕ್ಷಿಸಿದ್ದಾರೆ.
ಧಾಮಿಯವರು ಹೋಗಿದ್ದ ಪಿತ್ತೋರ್ಗಢದ ಧಾರ್ಚಾಲ್ ಪ್ರದೇಶ ಭಾರೀ ಮಳೆಗೆ ತುತ್ತಾಗಿ ಜಲಾವೃತವಾಗಿತ್ತು. ಇದನ್ನು ಪರಿಶೀಲನೆ ಮಾಡಲು ಹರೀಶ್ ಧಾಮಿ ಹೋಗಿದ್ದಾರೆ. ಪ್ರವಾಹ ಸ್ಥಳ ವೀಕ್ಷಿಸಿ ಅಲ್ಲಿನ ಜನರಿಗೆ ಧೈರ್ಯ ಹೇಳಿ ವಾಪಸ್ ಬರುತ್ತಿದ್ದರು. ಜೊತೆಗೆ ಮಳೆ ಬಂದು ಅವರು ಬರುವ ದಾರಿ ಕೆಸರು ತುಂಬಿಕೊಂಡಿತ್ತು. ಈ ದಾರಿಯಲ್ಲಿ ಬರುವಾಗ ಹರೀಶ್ ಅವರ ಆಯತಪ್ಪಿ ನೀರಿನೊಳಗೆ ಬಿದ್ದಿದ್ದಾರೆ. ಈ ವೇಳೆ ಅವರು ನೀರಿನಲ್ಲಿ ತೇಲಿಕೊಂಡು ಹೋಗಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಶಾಸಕ ಹರೀಶ್ ಧಾಮಿಯವರು, ರಸ್ತೆ ತುಂಬಾ ಕೆಸರಿನಿಂದ ಕೂಡಿತ್ತು. ಜೊತೆಗೆ ನೀರು ಕೂಡ ಹೆಚ್ಚಾಗಿತ್ತು. ಇದರಿಂದ ನಾನು ಸ್ವಲ್ಪ ಆಯತಪ್ಪಿ ಬಿದ್ದೆ. ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ಸ್ವಲ್ಪ ದೂರು ನೀರಿನಲ್ಲಿ ಕೊಚ್ಚಿಕೊಂಡು ಹೋದೆ. ಆದರೆ ಅಷ್ಟರಲ್ಲಿ ನನ್ನ ಜೊತೆಯಲ್ಲಿದ್ದ ಬೆಂಬಲಿಗರು ಸಹಾಯಕ್ಕೆ ಬಂದರು. ಅವರು ಬಂದು ನನ್ನ ದಡಕ್ಕೆ ಕರೆ ತಂದರು. ಈ ವೇಳೆ ನನಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಹೇಳಿದ್ದಾರೆ.