ಕೊಪ್ಪಳ: ಭೋರ್ಗರೆದು ಹರಿಯುತ್ತಿರುವ ನದಿಯಲ್ಲಿ ಹುಲಗಿ ಗ್ರಾಮದ ಯುವಕರು ಹುಚ್ಚು ಸಾಹಸ ಮಾಡಿ ಧ್ವಜವನ್ನು ಹಾರಿಸಿದ್ದಾರೆ.
ಯುವಕರು ಅಪಾಯಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರ ನದಿಯಲ್ಲಿ ಈಜಿ, ನದಿಯ ಮಧ್ಯದಲ್ಲಿ ಕಲ್ಲುಗಳನ್ನು ಜೋಡಿಸಿ ಧ್ವಜವನ್ನು ನೆಟ್ಟಿದ್ದಾರೆ.
ಈ ದೃಶ್ಯವನ್ನು ನೋಡುತ್ತಿದ್ದ ಗ್ರಾಮಸ್ಥರು ಸಾಹಸ ಮಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದರೂ ಯುವಕರು ನದಿಯ ಮಧ್ಯದಲ್ಲೇ ಧ್ವಜವನ್ನು ಹಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ರೀತಿ ಸಾಹಸ ಮಾಡಿ ದೇಶ ಪ್ರೇಮ ತೋರಿಸುವ ಅಗತ್ಯವಿಲ್ಲ. ಹೆಚ್ಚು ಕಡಿಮೆಯಾಗಿ ಪ್ರಾಣಕ್ಕೆ ಅಪಾಯ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನೀವು ರಾಷ್ಟ್ರ ಧ್ವಜವನ್ನು ಹಾರಿಸದೇ ಇದ್ದರೂ ಬೇಸರವಿಲ್ಲ. ಆದರೆ ದಯವಿಟ್ಟು ಈ ರೀತಿಯ ಹುಚ್ಚು ಸಾಹಸವನ್ನು ಯಾರು ಮಾಡಲು ಹೋಗಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾಭದ್ರ ನದಿಯು ಅಪಾಯದಮಟ್ಟವನ್ನು ಮೀರಿ ಹರಿಯುತ್ತಿದೆ. ಈಗಾಗಲೇ ತುಂಗಭದ್ರಾ ಜಲಾಶಯವು ಸಹ ತುಂಬಿದ್ದು, ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv