ಶಿವಮೊಗ್ಗ: ಕನ್ನಡ ಚಿತ್ರರಂಗ (Kannada Cinema) ಮತ್ತು ಕಿರುತೆರೆ ಲೋಕಕ್ಕೆ ಮತ್ತೊಂದು ಭರಿಸಲಾಗದ ಆಘಾತ ಎದುರಾಗಿದೆ. ಕನ್ನಡದ ಪ್ರತಿಭಾವಂತ ಯುವ ಬರಹಗಾರ ಮತ್ತು ಸಹ ನಿರ್ದೇಶಕರಾಗಿದ್ದ ನಂದೀಶ್ ಜಿ.ಟಿ (37) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿರುವ ತಮ್ಮ ನಿವಾಸದಲ್ಲಿದ್ದ ವೇಳೆಯೇ ನಂದೀಶ್ ಅವರಿಗೆ(Nandish GT) ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಚಿತ್ರಕಥೆ, ಸಂಭಾಷಣೆಯಲ್ಲಿ ಗುರುತಿಸಿಕೊಂಡಿದ್ದ ನಂದೀಶ್ ಅವರು ಕನ್ನಡ ಸಿನಿಮಾ ಹಾಗೂ ಧಾರಾವಾಹಿ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಹಲವಾರು ಕನ್ನಡ ಸಿನಿಮಾಗಳಿಗೆ ಹಾಗೂ ಜನಪ್ರಿಯ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಚುರುಕಾದ ಸಂಭಾಷಣೆಯನ್ನು ಬರೆಯುವ ಮೂಲಕ ಚಿತ್ರರಂಗದಲ್ಲಿ ಭರವಸೆಯ ಬರಹಗಾರನಾಗಿ ಗುರುತಿಸಿಕೊಂಡಿದ್ದರು.
ಕೇವಲ ಬರವಣಿಗೆಗೆ ಮಾತ್ರ ಸೀಮಿತವಾಗದೆ, ಇತ್ತೀಚೆಗಷ್ಟೇ ನಿಧನರಾದ ಸ್ಯಾಂಡಲ್ವುಡ್ನ ಪ್ರಸಿದ್ಧ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಜೊತೆಯಲ್ಲಿ ಹಲವು ಪ್ರಾಜೆಕ್ಟ್ಗಳಿಗೆ ಸಹ ನಿರ್ದೇಶಕರಾಗಿಯೂ (Associate Director) ಕಾರ್ಯನಿರ್ವಹಿಸಿದ್ದರು.
ನಂದೀಶ್ ಅವರ ಅಕಾಲಿಕ ಮರಣಕ್ಕೆ ಸ್ಯಾಂಡಲ್ವುಡ್ನ ಖ್ಯಾತ ಚಲನಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ಚಿತ್ರರಂಗ ಹಾಗೂ ಕಿರುತೆರೆಯ ಹಲವು ಗಣ್ಯರು, ನಿರ್ದೇಶಕರು ಮತ್ತು ಸಹೋದ್ಯೋಗಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಕೇವಲ 37ನೇ ವಯಸ್ಸಿಗೆ ಪ್ರತಿಭಾವಂತ ತಂತ್ರಜ್ಞನನ್ನು ಕಳೆದುಕೊಂಡಿರುವುದು ಕನ್ನಡ ಉದ್ಯಮಕ್ಕೆ ದೊಡ್ಡ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಮೃತ ನಂದೀಶ್ ಅವರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಒಳಗೊಂಡಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಅವರ ಸ್ವಗ್ರಾಮವಾದ ತೀರ್ಥಹಳ್ಳಿಯ ಮಾಳೂರಿನಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

