ನಿತೀಶ್ ತಿವಾರಿ (Nitish Tiwari) ನಿರ್ದೇಶನದಲ್ಲಿ ಮೂಡಿ ಬರಲಿರುವ ರಾಮಾಯಣವನ್ನು ಆಧರಿಸಿದ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಸಿನಿಮಾದಲ್ಲಿ ಅವರು ರಾವಣನಾಗಿ ಅಬ್ಬರಿಸಲಿದ್ದಾರೆ ಎಂದು ಹೇಳಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಈ ಸುದ್ದಿ ಸದ್ದು ಮಾಡಿದ್ದರೂ, ಈ ಕುರಿತಾಗಿ ಯಶ್ ಆಗಲಿ ಅಥವಾ ಸಿನಿಮಾ ತಂಡವಾಗಲಿ ಯಾವುದೇ ಹೇಳಿಕೆ ಕೂಡ ನೀಡಿರಲಿಲ್ಲ. ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು ಆ ಪಾತ್ರವನ್ನು ಮಾಡಲು ಯಶ್ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಯಶ್ ಕುರಿತಾಗಿ ಗಾಸಿಪ್ ಮೇಲೆ ಗಾಸಿಪ್ ಹುಟ್ಟಿಕೊಳ್ಳುತ್ತಿದ್ದರೂ, ಅಧಿಕೃತವಾಗಿ ಯಾರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಅಥವಾ ಅಲ್ಲಗಳೆಯುತ್ತಿಲ್ಲ. ರಾವಣನ ಪಾತ್ರವನ್ನು ಮಾಡಲ್ಲ ಎಂದು ಯಶ್ ಎಲ್ಲಿ ಅಧಿಕೃತವಾಗಿ ಹೇಳಿದ್ದಾರೋ ಗೊತ್ತಿಲ್ಲ. ಆದರೂ ಈ ಸುದ್ದಿ ಎಲ್ಲೆಡೆ ಪಸರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಯಶ್ ಯಾವುದೇ ವಿಷಯವಿದ್ದರೂ ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಮೂಲಕವೇ ತಿಳಿಸುತ್ತಿದ್ದಾರೆ. ಅಲ್ಲಿಯೂ ಈ ವಿಷಯ ಪ್ರಸ್ತಾಪವಾಗಿಲ್ಲ. ಇದನ್ನೂ ಓದಿ:ಚಿಟ್ಟೆಯಂತೆ ಮಿಂಚಿದ ಸಂತೂರ್ ಮಮ್ಮಿ ಪ್ರಣಿತಾ ಸುಭಾಷ್
ರಾಮಾಯಣ (Ramayana) ಆಧಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿನಿಂದ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರು ಇರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಧಿಕೃತವಾಗಿ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ತಾರಾಗಣದ ಯಾದಿ ಮಾತ್ರ ಹೊರಗೆ ಬಿದ್ದಿದೆ.
ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ (Ranbir Kapoor) ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್ (Alia Bhatt) ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ನಿಜ ಜೀವನದಲ್ಲೂ ಸತಿ-ಪತಿಯಾಗಿರುವ ರಣಬೀರ್ ಮತ್ತು ಆಲಿಯಾ ಭಟ್ ತೆರೆಯ ಮೇಲೂ ಅಂಥಧ್ದೇ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಳ್ಳುತ್ತಿದೆ.
ಇದರ ಜೊತೆಗೆ ಕನ್ನಡದ ನಟಿ ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾವಣ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸ್ಟಾರ್ ಗಳ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಟೀಕೆ ಮಾಡಿದ್ದರು. ಅದರಲ್ಲೂ ಪರೋಕ್ಷವಾಗಿ ರಣಬೀರ್ ಕಪೂರ್ ಟೀಕಿಸಿದ್ದರು. ಮಾದಕ ವ್ಯಸನಿ, ಬಿಳಿ ಇಲಿ ಅಂತೆಲ್ಲ ಕರೆದಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕಂಗನಾ ರಣಾವತ್ (Kangana Ranaut), ‘ನಾನು ಇತ್ತೀಚಿನ ದಿನಗಳಲ್ಲಿ ರಾಮಾಯಣ ಸಿನಿಮಾ ಬಗ್ಗೆ ಕೇಳುತ್ತಿರುವೆ. ಅದರಲ್ಲಿ ಮಾದಕ ವ್ಯಸನಿಯೊಬ್ಬ ರಾಮನ ಪಾತ್ರ ಮಾಡಲಿದ್ದಾನಂತೆ. ತೆಳ್ಳಗಿನ ಬಿಳಿ ಇಲಿಯು ಕೆಟ್ಟ ರೀತಿಯಲ್ಲಿ ಬೇರೆಯವರ ಬಗ್ಗೆ ಪಿ.ಆರ್ ಮಾಡಿಕೊಂಡು ಓಡಾಡುವಲ್ಲಿ ಕುಖ್ಯಾತಿ ಪಡೆದವನು. ಇವನು ಕೇವಲ ನಟನಲ್ಲ, ಹೆಣ್ಣು ಬಾಕ ಕೂಡ. ಇಂಥವನು ರಾಮನಾಗಲು ಬೆಳೆದು ನಿಂತಿದ್ದಾನೆ’ ಎಂದು ಜರಿದಿದ್ದರು.
ಯಶ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ ಎಂದು ಕೇಳಿದ್ದೇನೆ. ರಾವಣ ಪಾತ್ರಕ್ಕಿಂತ ಅವರಿಗೆ ರಾಮನ ಪಾತ್ರ ಹೊಂದುತ್ತದೆ ಎಂದು ಪರೋಕ್ಷವಾಗಿ ರಾಕಿಂಗ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದರು. ಈ ಎಲ್ಲ ಹೇಳಿಕೆಗಳ ನಡುವೆಯೂ ಅವರು ರಣಬೀರ್ ಕಪೂರ್ ಎಚ್ಚರಿಕೆಯನ್ನೂ ನೀಡಿದ್ದು, ‘ನೀನು ಒಮ್ಮೆ ಹೊಡೆದರೆ ನಾನು ಸಾಯೋತನಕ ಹೊಡೆಯುತ್ತೇನೆ. ಗಲಾಟೆ ಮಾಡದೇ ದೂರ ಇರು’ ಎಂದು ಬರೆದುಕೊಂಡಿದ್ದರು.