ಚಂಡೀಗಢ: ಗುರುದ್ವಾರದ (Gurudwara) ಆವರಣದಲ್ಲಿ ಮದ್ಯಪಾನ ಮಾಡಿದ ಆರೋಪದ ಮೇಲೆ ಮಹಿಳೆಯನ್ನು (Woman) ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್ನ (Punjab) ಪಟಿಯಾಲದಲ್ಲಿ (Patiala) ನಡೆದಿದೆ.
ಪರ್ಮಿಂದರ್ ಕೌರ್ (32) ಎಂದು ಗುರುತಿಸಲಾದ ಮಹಿಳೆ ಹತ್ಯೆಯಾಗಿದ್ದು, ಗುರುದ್ವಾರಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ನಿರ್ಮಲಜಿತ್ ಸಿಂಗ್ ಸೈನಿ ಮಹಿಳೆ ಮೇಲೆ 5 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಭಾನುವಾರ ರಾತ್ರಿ ಪರ್ಮಿಂದರ್ ಕೌರ್ ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಪವಿತ್ರ ನೀರಿನ ಕೊಳದ ಬಳಿ ಮದ್ಯಪಾನ ಮಾಡುತ್ತಿದ್ದಳು. ಇದನ್ನು ಗಮನಿಸಿದ ಗುರುದ್ವಾರದ ಸಿಬ್ಬಂದಿ ಆಕೆಯನ್ನು ಮ್ಯಾನೇಜರ್ ಕಚೇರಿಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ ಅಷ್ಟು ಹೊತ್ತಿಗಾಗಲೇ ನಿರ್ಮಲಜಿತ್ ಸಿಂಗ್ ಸೈನಿ ಕೋಪದಿಂದ ತನ್ನ ಪರವಾನಗಿ ಪಡೆದ ರಿವಾಲ್ವರ್ನಿಂದ ಮಹಿಳೆ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಬಜರಂಗದಳಕ್ಕೆ ಪಿಎಫ್ಐ ಹೋಲಿಕೆ – ಖರ್ಗೆಗೆ ಕೋರ್ಟ್ ಸಮನ್ಸ್
ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಆರೋಪಿ ನಿರ್ಮಲಜಿತ್ ಆಸ್ತಿ ಡೀಲರ್ ಆಗಿದ್ದು, ಯಾವುದೇ ಅಪರಾಧ ಚಟುವಟಿಕೆಗಳ ಇತಿಹಾಸ ಹೊಂದಿಲ್ಲ ಎನ್ನಲಾಗಿದೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 10 ಸಾವು – 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು