ಉಡುಪಿ: ಬಿಜೆಪಿ ಪರ ಅಲೆಯಿಂದಲೇ ನಾವು ಸೋಲು ಅನುಭವಿಸಿದ್ದೇವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪರಾಜಿತ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಟ್ವೀಟ್ ಮೂಲಕ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯ ಪರವಾಗಿ ಅಲೆ ಇದ್ದಾಗ ನಾವೆಲ್ಲರೂ ಅಹಾಯಕರಾಗುತ್ತೇವೆ. ಆದಾಗ್ಯೂ ಮತದಾರರು ನಮ್ಮ ಮೇಲಧಿಕಾರಿಗಳಾಗಿದ್ದಾರೆ ಮತ್ತು ಅವರ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ಅವರು ನಿನ್ನೆ ರಾತ್ರಿ ಕೂಡ ಟ್ವೀಟ್ ಮಾಡಿ, ಫಲಿತಾಂಶವು ಇಂದು ಹೊರಬೀಳಲಿದೆ. ನಾನು ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದೇನೆ. ಅತ್ಯಂತ ಹೀನಾಯ ಪರಿಸ್ಥಿತಿ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಭಾರೀ ಅಂತರದ ಮುನ್ನಡೆ ಸಾಧಿಸಿದ್ದು ಸತತ ಎರಡನೇ ಬಾರಿ ಸಂಸತ್ ಪ್ರವೇಶಿಸುತ್ತಿದ್ದಾರೆ.