– ಮಿತ್ರಪಕ್ಷಗಳ ಬೆಂಬಲವಿಲ್ಲದೇ ಸಿಎಂ ಆದ್ರೆ ಸರ್ಕಾರ ಮುಂದುವರಿಯಲ್ಲ
– ಕೆ.ಸಿ ವೇಣುಗೋಪಾಲ್ಗೆ ಸಿಎಂ ಪಟ್ಟ ಫಿಕ್ಸ್
ತಿರುವನಂತಪುರಂ: ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ಕೊಡಿ, ಇಲ್ಲದಿದ್ರೆ ಶಾಸಕನಾಗಿಯೇ ಇರುತ್ತೇನೆ. ಸಚಿವ ಸ್ಥಾನ ಮಾತ್ರ ಬೇಡ ಎಂದು ಕಾಂಗ್ರೆಸ್ ಹಿರಿಯ ನಾಯಕ ವಿ.ಡಿ. ಸತೀಸನ್ (VD Satheesan) ಪಟ್ಟು ಹಿಡಿದಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಮುಖ್ಯಮಂತ್ರಿ (Chief Minister) ಹುದ್ದೆಗಾಗಿ ಪ್ರಮುಖ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ಕೇರಳದಲ್ಲೂ ಈಗ ಕುರ್ಚಿಗಾಗಿ ಫೈಟ್ ಶುರುವಾಗಿದೆ. ಹಿರಿಯ ʻಕೈʼ ನಾಯಕ ವಿ.ಡಿ ಸತೀಸನ್ ಸಿಎಂ ಸ್ಥಾನಕ್ಕೆ ಬಿಗಿಪಟ್ಟು ಹಿಡಿದ್ದಾರೆ. ಪಿಣರಾಯಿ ವಿಜಯನ್ ಅವರ 10 ವರ್ಷದ ಆಡಳಿತ ಅಂತ್ಯಗೊಳಿಸಿ ಯುಡಿಎಫ್ (UDF) ಅಧಿಕಾರಕ್ಕೆ ಬಂದ ಆರಂಭದಲ್ಲೇ ಈ ಕಿತ್ತಾಟ ಶುರುವಾಗಿದೆ.
ಸಿಎಂ ಹುದ್ದೆ ಹೊರತುಪಡಿಸಿ ಬೇರೆ ಯಾವುದೇ ಹುದ್ದೆ ನನಗೆ ಬೇಡ. ಯಾವುದೇ ಷರತ್ತಿಗೂ ಮಣಿಯಲ್ಲ, ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸದಿದ್ದರೆ ಸಂಪುಟದ ಭಾಗವಾಗಿರೋದಿಲ್ಲ ಎಂದು ಹೈಕಮಾಂಡ್ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮುಕುಲ್ ವಾಸ್ನಿಕ್ ಅವರಿಗೆ ತಿಳಿಸಿದ್ದಾರೆ.

ಉನ್ನತ ಖಾತೆ ತಿರಸ್ಕರಿಸಿದ ಸತೀಸನ್
ಹೈಕಮಾಂಡ್ ಮೊದಲೇ ತೀರ್ಮಾನಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರಿಗೆ ಸಿಎಂ ಹುದ್ದೆ ನೀಡಿ, ಸತೀಸನ್ ಅವರಿಗೆ ಪ್ರಮುಖ ಖಾತೆಗಳನ್ನ ನೀಡಿ ಮನವೊಲಿಸಲು ಮುಂದಾಗಿತ್ತು. ಆದ್ರೆ ರಾಜಿ ಸೂತ್ರವನ್ನ ಸತೀಸನ್ ತಿರಸ್ಕರಿಸಿದ್ದಾರೆ. ಯಾವುದೇ ಹೊಂದಾಣಿಕೆಗೂ ನಾನು ಒಪ್ಪಲ್ಲ ಎಂದಿದ್ದಾರೆ.
ಸತೀಸನ್ ಅವರಿಗೆ ಯುಡಿಎಫ್ ಮಿತ್ರಪಕ್ಷಗಳಾದ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್ ಮತ್ತು ಆರ್ಎಸ್ಪಿಗಳು ಸಂಪೂರ್ಣ ಬೆಂಬಲ ನೀಡಿವೆ. ಅಲ್ಲದೇ ಮಿತ್ರಪಕ್ಷಗಳ ಬೆಂಬಲವಿಲ್ಲದೇ ಯಾದ್ರೂ ಮುಖ್ಯಮಂತ್ರಿಯಾದರೆ, ಸರ್ಕಾರವನ್ನ ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ರವಾನಿಸಿವೆ.

ಕೆ.ಸಿ ವೇಣುಗೋಪಾಲ್ಗೆ ಹೆಚ್ಚಿನ ಬೆಂಬಲ
ಕುರ್ಚಿ ಕಿತ್ತಾಟದ ನಡುವೆಯೂ ಶಾಸಕರು ಮತ್ತು ಸಂಸದರ ಬೆಂಬಲದ ವಿಷಯದಲ್ಲಿ ಕೆ.ಸಿ. ವೇಣುಗೋಪಾಲ್ ಮೇಲುಗೈ ಸಾಧಿಸಿದ್ದಾರೆ. ಕೆ.ಸಿ ಅವರ ಕಡೆಯವರು ತಮಗೆ ಹೆಚ್ಚಿನ ನಾಯಕತ್ವ ಮತ್ತು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಶಾಸಕರ ಬೆಂಬಲದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳದಂತೆ ಮಿತ್ರಪಕ್ಷದ ನಾಯಕರು ಹೈಕಮಾಂಡ್ಗೆ ಒತ್ತಾಯ ಮಾಡಿದ್ದಾರೆ.
2021 ರ ಚುನಾವಣೆಯ ನಂತರ ವಿಪಕ್ಷ ನಾಯಕರ ಆಯ್ಕೆಗೆ ನಿರ್ಧರಿಸಿದಾಗ, ರಮೇಶ್ ಚೆನ್ನಿತ್ತಲ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿತ್ತು. ಆದಾಗ್ಯೂ, ಹೈಕಮಾಂಡ್ ಆ ಸ್ಥಾನಕ್ಕೆ ಸತೀಶನ್ ಅವರನ್ನು ಆಯ್ಕೆ ಮಾಡಿತು. ಪ್ರಸ್ತುತ ಬಿಕ್ಕಟ್ಟಿನಲ್ಲಿಯೂ ಸಹ, ಹೈಕಮಾಂಡ್ನ ನಿರ್ಧಾರವೇ ಅಂತಿಮವಾಗಿರುತ್ತದೆ.

