ಮಂಡ್ಯ: ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಉತ್ಸವ (Melkote Vairamudi Utsava) ಇಂದು (ಗುರುವಾರ) ರಾತ್ರಿ ಜರುಗಲಿದ್ದು, ಚೆಲುವನಾರಾಯಣಸ್ವಾಮಿ ದೇಗುಲಕ್ಕೆ (Melkote Cheluva Narayana Swamy Temple) ಲಕ್ಷಾಂತರ ಭಕ್ತರು ಬಂದು ವೈರಮುಡಿ ಉತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ.
ವಿಜೃಂಭಣೆಯ ಉತ್ಸವಕ್ಕೆ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಸಜ್ಜಾಗಿದ್ದು. ರಾತ್ರಿ 8:30ಕ್ಕೆ ಸಲ್ಲುವ ಆಶ್ಲೇಷ ನಕ್ಷತ್ರದಲ್ಲಿ ವೈರಮುಡಿ ಉತ್ಸವಕ್ಕೆ ಚಾಲನೆ ಸಿಗಲಿದೆ. ವೈರಮುಡಿ ಉತ್ಸವ ನೋಡಲು 2 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ. ಈಗಾಗಲೇ ತಮಿಳುನಾಡು, ಕೇರಳ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ. ವೈಭವಯುತ ಉತ್ಸವಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ
ಬೆಳಗ್ಗೆ 7:30ಕ್ಕೆ ಜಿಲ್ಲಾ ಖಜಾನೆಯಿಂದ ವಜ್ರಖಚಿತ ವೈರಮುಡಿ ಆಭರಣಗಳನ್ನು ಬಿಗಿ ಭದ್ರತೆಯಲ್ಲಿ ಮಂಡ್ಯದಿಂದ ಮೇಲುಕೋಟೆಗೆ ತರಲಾಗಿದೆ. ಡಿಸಿ, ಎಸ್ಪಿ ನೇತೃತ್ವದಲ್ಲಿ ಆಭರಣಗಳ ಪರಿಶೀಲನೆ ಬಳಿಕ ಖಜಾನೆಯಿಂದ ವೈರಮುಡಿ ಆಭರಣ ತರಲಾಗಿದ್ದು, ಈಗಾಗಲೇ ಲಕ್ಷ್ಮಿ ಜನಾರ್ದನ ಸ್ವಾಮಿ ದೇವಾಲಯದಲ್ಲಿ ವೈರಮುಡಿ ಕೀರಿಟಕ್ಕೆ ಮೊದಲ ಪೂಜೆ ಸಲ್ಲಿಕೆಯಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ವೈರಮುಡಿ ಆಭರಣ ಇರುವ ವಾಹನ ಹಾದು ಹೋಗಲಿದ್ದು, ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು, ಪಾಂಡವಪುರ, ಜಕ್ಕನಹಳ್ಳಿ ಮಾರ್ಗವಾಗಿ ಮೇಲುಕೋಟೆಗೆ ಆಭರಣದ ವಾಹನ ತಲುಪಲಿದೆ. ಮಾರ್ಗದುದ್ದಕ್ಕೂ ಸಿಗುವ ಗ್ರಾಮಗಳಲ್ಲಿ ವೈರಮುಡಿ ಕಿರೀಟದ ಪೂಜೆ ನಡೆಯಲಿದೆ. ಸಂಜೆ 6 ವೇಳೆಗೆ ಮೇಲುಕೋಟೆಗೆ ವೈರಮುಡಿ ಕಿರೀಟ ಹಾಗೂ ಆಭರಣ ತಲುಪಲಿದೆ.
ಬಳಿಕ ಶ್ರೀ ಚೆಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಗೆ ಕಿರೀಟ ಧಾರಣೆ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ವೈರಮುಡಿ ಉತ್ಸವ ನಡೆಯಲಿದೆ. ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಇಂದು ಸಂಜೆ ಮೇಲುಕೋಟೆ ಕಂಗೊಳಿಸಲಿದೆ. ಇದನ್ನೂ ಓದಿ: 5,8,9 ತರಗತಿಗೆ ಪರೀಕ್ಷೆ ಯಾವಾಗ? – ಗೊಂದಲದಲ್ಲಿ ವಿದ್ಯಾರ್ಥಿಗಳು, ಪೋಷಕರು