ಉಡುಪಿ: ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಂದೂಕು ಹಿಡಿದು ಸದಾ ಗಸ್ತು ತಿರುಗೋದು ಎಎನ್ಎಫ್ ಕರ್ತವ್ಯ. ಆ್ಯಂಟಿ ನಕ್ಸಲ್ ಫೋರ್ಸ್ ಸಿಬ್ಬಂದಿ ಕರ್ತವ್ಯಕ್ಕೆ ಹೊರತಾಗಿ ಸಾರ್ವಜನಿಕರು ಮೆಚ್ಚುವ ಕಾರ್ಯ ಮಾಡಿದ್ದಾರೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ನಕ್ಸಲ್ ಪೀಡಿತ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಾರೆ. ನಕ್ಸಲ್ ಪೀಡಿತ ಪ್ರದೇಶ ಕಬ್ಬಿನಾಲೆಯಲ್ಲಿ ಹೆಲ್ತ್ ಕ್ಯಾಂಪ್ ಮಾಡಿ, ಹೆಬ್ರಿ ತಾಲೂಕಿಗೆ ಒಳಪಡುವ ನಕ್ಸಲ್ ಪೀಡಿತ ಎಲ್ಲಾ ಗ್ರಾಮಗಳ ಜನರನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ.
ತೀರಾ ಗ್ರಾಮೀಣ ಪ್ರದೇಶದ ಜನರನ್ನು ಎಎನ್ಎಫ್ ಅಧಿಕಾರಿಗಳು ತಮ್ಮದೇ ಜೀಪಿನಲ್ಲಿ ಕರೆದುಕೊಂಡು ಬಂದು ತಪಾಸಣೆಗೆ ಒಳಪಡಿಸಿದ್ದಾರೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಅಲ್ಲೇ ಔಷಧಿ ಕೊಡಿಸಿದ್ದಾರೆ. ಮುಂಗಾರು ಮಳೆ ಆರಂಭದಲ್ಲಿ ಜ್ವರ, ಚರ್ಮರೋಗ ಗ್ರಾಮಸ್ಥರಿಗೆ ಆವರಿಸುವುದರಿಂದ ಈ ಹೆಲ್ತ್ ಕ್ಯಾಂಪ್ ಬಹಳ ಮಹತ್ವ ಪಡೆದಿದೆ. ಜನಕ್ಕೂ ಈ ಹೆಲ್ತ್ ಕ್ಯಾಂಪ್ ಬಹಳ ಉಪಯೋಗವಾಗಿದೆ.