– ಭೇಟಿ ಬಗ್ಗೆ ಮಾಜಿ ಸಚಿವರು ಹೇಳಿದ್ದೇನು..?
ತುಮಕೂರು: ಜಿಲ್ಲೆಯ ರಾಜಕೀಯ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಬ್ಬರ ಮುನಿಸು.. ಮೂರನೇ ವ್ಯಕ್ತಿಗೆ ಲಾಭ ಎಂಬಂತೆ ಇಂದು ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ (MuddahanumeGowda) ಭೇಟಿ ಮಾಡುವ ಮೂಲಕ ತೀವ್ರ ಕುತೂಹಲ ಹುಟ್ಟಿಸಿದ್ದಾರೆ.
ಮಾಧುಸ್ವಾಮಿಯವರು (Madhuswamy) ಲೋಕಸಭಾ ಚುನಾವಣೆಯ (Loksabha Elections 2024) ಟಿಕೆಟ್ ತಪ್ಪಿದ್ದಿಂದ ಅಸಮಾಧಾನಗೊಂಡಿದ್ದರು. ಬಳಿಕ ಯಡಿಯೂರಪ್ಪರ ಮಧ್ಯಸ್ಥಿಕೆಯಿಂದ ಸಮಾಧಾನಗೊಂಡಿದ್ದರು. ಆದರೆ ಇದೀಗ ದಿಢೀರ್ ಆಗಿ ಮುದ್ದಹನುಮೇಗೌಡ-ಮಾಧುಸ್ವಾಮಿ ಭೇಟಿ ಕುತೂಹಲ ಕೆರಳಿಸಿದೆ. ಭೇಟಿಯ ವೇಳೆ ಮುದ್ದಹನುಮೇಗೌಡ ಅವರು ಚುನಾವಣೆಯಲ್ಲಿ ಬೆಂಬಲಿಸುವಂತೆ ಮಾಧುಸ್ವಾಮಿಯ ಸಹಕಾರ ಕೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Tumakuru Look Sabha 2024: ಜಿದ್ದಾಜಿದ್ದಿನ ಕಣದಲ್ಲಿ ಗೆಲ್ಲೋದ್ಯಾರು?
ಬಳಿಕ ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರು ಬಹಳ ಹಳೆಯ ಸ್ನೇಹಿತರು. ಇಬ್ಬರು ಒಟ್ಟಿಗೆ ಶಾಸಕರಾಗಿದ್ದವರು. ಸ್ನೇಹಿತರು ಅಂತ ಒಬ್ಬ ಅಭ್ಯರ್ಥಿ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸೊದು ಬೇಡ. ಸೌಜನ್ಯದ ಭೇಟಿ ಮಾಡಿದ್ದಾರೆ. ಕ್ಯಾಂಡಿಡೇಟ್ ಆದವರು ಸಪೋರ್ಟ್ ಕೇಳಿದ್ದಾರೆ. ನಾವು ಬೇರೆ ಪಕ್ಷದಲ್ಲಿ ಇರುವವರು ಸಪೋರ್ಟ್ ಮಾಡುವುದಕ್ಕೆ ಆಗುತ್ತಾ?. ಅದೆಲ್ಲಾ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ವಿ. ಸೋಮಣ್ಣ ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ನಿಂದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.