ಕನ್ನಡದ ಹೆಸರಾಂತ ನಿರ್ಮಾಪಕ ಹಾಗೂ ನಟ ರವಿಕಿರಣ್ (Ravikiran) ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಕರ್ನಾಟಕ ಟೆಲಿವಿಷ್ ಕ್ಲಬ್ (Television Club) ನಲ್ಲಿ ಹಣ ದುರುಪಯೋಗ ಮತ್ತು ಅಕ್ರಮ ಸೇರಿದಂತೆ ನಾನಾ ಆರೋಪಗಳನ್ನು ಸಂಘದ ಸದಸ್ಯರು ಮತ್ತು ಕಲಾವಿದರು ಮಾಡಿದ್ದಾರೆ. ಜೊತೆಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ.
ಕಳೆದ 20 ವರ್ಷದಿಂದ ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರಿಗಾಗಿ ಕ್ಲಬ್ ಇದೆ. ಆನಂತರ ಅದು ಉತ್ತರ ಹಳ್ಳಿ ಬಳಿ ಕರ್ನಾಟಕ ಟೆಲಿವಿಷನ್ ಕ್ಲಬ್ ಸರ್ಕಾರದ ಅನುದಾನದಲ್ಲಿ ಕೊಟ್ಟ ಜಾಗದಲ್ಲಿ ನಿರ್ಮಾಣಗೊಂಡಿದೆ. ಜೊತೆಗೆ ಸರ್ಕಾರವೇ 3 ಕೋಟಿಗೂ ಅಧಿಕ ಹಣ ಸಹ ಕ್ಲಬ್ ಗಾಗಿ ನೀಡಿದೆ. ಈ ಕ್ಲಬ್ ನಲ್ಲಿ ಸಾವಿರಾರು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ.
ಕ್ಲಬ್ ಆರಂಭದಿಂದ ಈವರೆಗೂ ರವಿಕಿರಣ್ ಕಾರ್ಯದರ್ಶಿಯಾಗಿದ್ದಾರೆ. ಕ್ಲಬ್ ನಿರ್ಮಾಣವನ್ನು ಕಾಂಟ್ರಾಕ್ಟ್ ನೀಡದೆ ಸಹೋದರನಿಗೆ ನೀಡಿ ಅವ್ಯವಹಾರ ಮಾಡಿದ್ದಾರೆಂದು ಆರೋಪ ಮಾಡಲಾಗುತ್ತಿದೆ. ಜೊತೆಗೆ ಕ್ಲಬ್ ಗೆ ಸಂಬಂಧಿಸಿದ ಜಿಎಸ್ ಟಿ, ಬಿಬಿಎಂಪಿ ಟ್ಯಾಕ್ಸ್ ಸೇರಿದಂತೆ ಹಲವು ತೆರಿಗೆಗಳ ಪಾವತಿ ಮಾಡಿಲ್ಲ ಎನ್ನುವ ಗಂಭೀರ ಆರೋಪವೂ ಅವರ ಮೇಲಿದೆ. ಹಣವನ್ನು ಪಾವತಿ ಮಾಡದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಈ ವಿಚಾರದ ಚರ್ಚೆ ಹೆಚ್ಚಾದಾಗ ರವಿಕಿರಣ್ ಅವರ ಸದಸ್ಯತ್ವವನ್ನು ಸಸ್ಪೆಂಡ್ ಮಾಡಲಾಗಿತ್ತು. ಕ್ಲಬ್ ಗೆ ಬರದಂತೆ ಆದೇಶ ಇದ್ದರೂ ಸಹ ಬಂದು ಕ್ಲಬ್ ನಲ್ಲಿದ್ದ 6 ಲಕ್ಷ ಹಣ ರವಿಕಿರಣ್ ತೆಗೆದುಕೊಂಡು ಹೋಗಿದ್ದಾರಂತೆ. ಜೊತೆಗೆ ಕ್ಲಬ್ ನಲ್ಲಿ ಅನುಮತಿ ಇಲ್ಲದಿದ್ದರೂ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಗಲಾಟೆಯಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ ಕೆಲ ಕಲಾವಿದರು.
ರವಿಕಿರಣ್ ವಿರುದ್ಧ ಮುಂದೆ ತೀವ್ರವಾದ ಹೋರಾಟ ಮಾಡುವುದಾಗಿ ಕಲಾವಿದರು ಹೇಳಿದ್ದಾರೆ. ತಮ್ಮ ತಮ್ಮಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಠಾಣಾಧಿಕಾರಿಗಳು (Police) ತಿಳಿಸಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ.