ತುಮಕೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರೊಬ್ಬರಿಗೆ ಶಾಕ್ ನೀಡಿದ್ದಾರೆ. ಉದ್ಯಮಿಗೆ ಟಿಕೆಟ್ ನೀಡುವುದಾಗಿ ಭರವಸೆ ಕೊಡುವ ಮೂಲಕ ಜೆಡಿಎಸ್ ಶಾಸಕನಿಗೆ ಹೆಚ್ಡಿಕೆ ಶಾಕ್ ನೀಡಿದ್ದಾರೆ.
ತೆರೆಮರೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಭೇಟಿ ಮಾಡಿ, ಚುನಾವಣೆ ಸಮೀಪದಲ್ಲಿ ‘ಕೈ’ ಹಿಡಿಯಲು ಸ್ಕೆಚ್ ಹಾಕಿದ್ದರು. ಆದರೆ ಶಾಸಕನ ನಡೆಯ ಮರ್ಮ ಅರಿತ ಕುಮಾರಸ್ವಾಮಿ, ಪ್ರತಿತಂತ್ರ ಹೂಡುತ್ತಿದ್ದಾರೆ. ಗುಬ್ಬಿ ಕ್ಷೇತ್ರದಲ್ಲೇ ಕುಮಾರಸ್ವಾಮಿ ಹೊಸ ಅಭ್ಯರ್ಥಿ ಹುಟ್ಟು ಹಾಕಿದ್ದಾರೆ. ಇದನ್ನೂ ಓದಿ: ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಹೆಚ್ಡಿಕೆ
ಸಿ.ಎಸ್.ಪುರ ಮೂಲದ ಉದ್ಯಮಿಗೆ ಮುಂದಿನ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದಾರೆ. ಉದ್ಯಮಿ ನಾಗರಾಜು ಎಂಬವರಿಗೆ ಜೆಡಿಎಸ್ ಟಿಕೆಟ್ ನೀಡಲು ತಂತ್ರ ರೂಪಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಗುಬ್ಬಿಯಲ್ಲೇ ಹೊಸ ಕ್ಯಾಂಡಿಡೇಟ್ ಸೃಷ್ಟಿಸಿದ್ದಾರೆ. ಸಿ.ಎಸ್.ಪುರ ನಿವಾಸಿ ನಾಗರಾಜು ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಿದ್ಧತೆ ನಡೆಸಲಾಗಿದೆ. ಖುದ್ದು ಕುಮಾರಸ್ವಾಮಿಯೇ ಹೊಸ ಅಭ್ಯರ್ಥಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಗುಬ್ಬಿ ಪಟ್ಟಣದಲ್ಲಿ ಅದ್ಧೂರಿ ಸೇರ್ಪಡೆ ಕಾರ್ಯಕ್ರಮ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಮೆಸೇಜ್ ಪಾಸ್ ಮಾಡಲು ಚಿಂತಿಸಿದ್ದು, ಈ ಮೂಲಕ ಶಾಸಕ ಶ್ರೀನಿವಾಸ್ ನಡೆಗೆ ಪ್ರತಿತಂತ್ರ ರೂಪಿಸಿದ್ದಾರೆ.
ಇತ್ತ ಕುಮಾರಸ್ವಾಮಿ ತಂತ್ರಕ್ಕೆ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಶಾಸಕ ಎಸ್.ಆರ್ ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದು, ಎಲ್ಲಾ ಕ್ಷೇತ್ರದಲ್ಲಿ ಇಬ್ಬಿಬ್ಬರನ್ನು ಇಟ್ಟಿರ್ತಾರೆ, ಅದು ನಮ್ಮನಾಯಕರ ಗುಣ. ಗುಬ್ಬಿಯಲ್ಲಿ ಬೇರೆಯವರನ್ನ ಕರೆದುಕೊಂಡು ಬಂದು ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಇರೋರ ಮೇಲೆ ಇನ್ನೊಬ್ಬರನ್ನ ಎತ್ತಿಕಟ್ಟೋದು ಪಕ್ಷದ ನಿರಂತರವಾದ ನಡೆವಳಿಕೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಇಬ್ಬಿಬ್ಬರನ್ನ ಇಡೋದು ನಮ್ಮ ನಾಯಕರ ಗುಣ. ಈ ಭಾಗದಲ್ಲಿ ಯಾರು ಸಿಕ್ಕಿರಲಿಲ್ಲ ಇಷ್ಟು ದಿನ ಇರಲಿಲ್ಲ, ಈವಾಗ ಸಿಕ್ಕವ್ರೆ ಅದಕ್ಕೆ ಎತ್ಕಟ್ಟಿದ್ದಾರೆ. ನನಗೆ ಕುಮಾರಸ್ವಾಮಿ ಮೇಲೆ ಯಾವುದೇ ಮುನಿಸಿಲ್ಲ, ಅವರೇ ಕ್ರಿಯೆಟ್ ಮಾಡ್ತಿದ್ದಾರೆ. ಮೊನ್ನೆ ತಾನೇ ನಾನು ದೇವೇಗೌಡರನ್ನ ಭೇಟಿ ಮಾಡಿ ಪಕ್ಷದ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ. ನಾನು ಎಲ್ಲಿಯೂ ಪಕ್ಷ ಬಿಡ್ತೀನಿ ಅಂತ ಹೇಳಿಲ್ಲ. ಅದಾದ್ಮೇಲೂ ಇನ್ನೊಬ್ಬರನ್ನ ಹಾಕೋದಾದ್ರೆ ಸಂತೋಷ ಎಂದು ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್