ಬೆಂಗಳೂರು: ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಹೊರವಲಯದ ನೆಲಮಂಗಲ ಟೌನ್ ಪೊಲೀಸರು ಬೈಕ್ ರ್ಯಾಲಿ ಮೂಲಕ ಸಾರ್ವಜನಿಕ ಜಾಗೃತಿಗೆ ಮೂಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಅಪರ ಪೊಲೀಸ್ ಅಧೀಕ್ಷಕ ಸಜೀತ್ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಉಪವಿಭಾಗದ ಪೊಲೀಸ್ ಸಿಬ್ಬಂದಿ ಜೊತೆ ಕೈಜೋಡಿಸಿದ ಸಾರ್ವಜನಿಕರು, ನೆಲಮಂಗಲ ಪಟ್ಟಣದ ವಿವಿಧ ಬಡಾವಣೆ, ಹೊರವಲಯದಲ್ಲಿ ಸಂಚಾರಿ ನಿಯಮಗಳ ಕುರಿತು ಮಾಹಿತಿ ಇರುವ ಭಿತ್ತಿ ಪತ್ರಗಳನ್ನು ನೀಡಿ ಜಾಗೃತಿ ಮೂಡಿಸಿದರು. ಪೊಲೀಸ್ ಇಲಾಖೆ ಜನರೊಂದಿಗೆ ಬೆರೆತು ಕೆಲಸ ಮಾಡಲು ಹಾಗೂ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರ ಜೊತೆ ಕೈಜೋಡಿಸಿ. ಜೊತೆಗೆ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದರು.
ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಬೈಕ್ ರ್ಯಾಲಿ ಮೂಲಕ ಜನರಿಗೆ ಅರಿವು ಮೂಡಿಸಿದರು. ಈ ವೇಳೆ ಡಿವೈಎಸ್ಪಿ ಮೋಹನ್ ಕುಮಾರ್, ಸಿಪಿಐ ಶಿವಣ್ಣ, ಟ್ರಾಫಿಕ್ ಸಿಪಿಐ ವೀರೇಂದ್ರ ಪ್ರಸಾದ್, ನೆಲಮಂಗಲ ಟೌನ್ ಪಿಎಸ್ಐ ಮಂಜುನಾಥ್, ಮೋಹನ್ ಕುಮಾರ್, ಪೊಲೀಸ್ ಸಿಬ್ಬಂದಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.