ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಚಿಲ್ಲಂ ಚಿತ್ರ ತನ್ನ ತಾರಾಗಣದಿಂದಲೇ ಕ್ಯೂರಿಯಾಸಿಟಿ ಕೆರಳಿಸುತ್ತಾ ಸಾಗುತ್ತಿದೆ. ಈ ಬಾರಿ ಡಿಫರೆಂಟಾದ ಕಥಾ ಹಂದರದ ಮೂಲಕ ನೆಲೆ ನಿಲ್ಲುವ ತೀರ್ಮಾನ ಮಾಡಿರುವ ಮನೋರಂಜನ್ ಗೆ ಚಿಲ್ಲಂ ಚಿತ್ರದ ಬಗೆಗೆ ದಿನೇ ದಿನೇ ಹುಟ್ಟಿಕೊಳ್ಳುತ್ತಿರುವ ನಿರೀಕ್ಷೆಗಳು ಮತ್ತಷ್ಟು ಬಲ ತುಂಬಿವೆ.
ಕೆಲ ದಿನಗಳ ಹಿಂದಷ್ಟೇ ರಾಘವೇಂದ್ರ ರಾಜ್ ಕುಮಾರ್ ಅವರು ಈ ಚಿತ್ರದ ತಾರಾಗಣ ಸೇರಿಕೊಂಡಿರೋ ಬಗ್ಗೆ ಭಾರೀ ಸುದ್ದಿಯಾಗಿತ್ತು. ಈಗ ಅದರ ಬೆನ್ನಲ್ಲಿಯೇ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಚಿಲ್ಲಂ ಚಿತ್ರ ತಂಡ ಸೇರಿಕೊಂಡಿರುವ ಸುದ್ದಿ ಬಂದಿದೆ!
ಜಗಪತಿ ಬಾಬು ಖದರ್ ಹೊಂದಿರೋ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಕಥೆ ಮತ್ತು ತಮ್ಮ ಪಾತ್ರದ ಆವೇಗವನ್ನು ಕಂಡು ಖುಷಿಯಾಗಿಯೇ ಬಾಬು ಮನೋರಂಜನ್ ಜೊತೆ ನಟಿಸಲು ಒಪ್ಪಿಕೊಂಡಿದ್ದಾರಂತೆ. ಪ್ರತೀ ಪಾತ್ರಗಳಿಗೂ ಕೂಡಾ ಚಿತ್ರ ತಂಡ ಅಳೆದೂ ತೂಗಿ ಅದಕ್ಕೆ ಸೂಟು ಆಗುವಂಥಾ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ಇನ್ನುಳಿದ ಒಂದಷ್ಟು ಪಾತ್ರಗಳಿಗೂ ಕೂಡಾ ಇಷ್ಟರಲ್ಲಿಯೇ ಆಯ್ಕೆ ಕಾರ್ಯ ಪೂರ್ಣ ಗೊಳ್ಳಲಿದೆಯಂತೆ.
ಅಂತೂ ಚಿಲ್ಲಂ ಚಿತ್ರದ ಮೂಲಕ ಮನೋರಂಜನ್ ಅವರು ಚಿಂದಿ ಉಡಾಯಿಸುವಂಥಾ ಪಾತ್ರದಲ್ಲಿ ಈ ಸಲ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ!