ಚಿತ್ರದುರ್ಗ: ಮುಸ್ಲಿಂರ ವಿರುದ್ಧ ಅಷ್ಟೊಂದು ಚಾಲೆಂಜ್ ಮಾಡುವುದಾದರೆ ಮುಸ್ಲಿಂ ದೇಶಗಳಿಂದ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ನ್ನು ತರಿಸಿಕೊಳ್ಳಬೇಡಿ ಎಂದು ಟಿಪ್ಪು ಸುಲ್ತಾನ್ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ ಸವಾಲು ಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಪ್ರತಿಕ್ರಿಯಿಸಿದ ಅವರು, ವ್ಯಾಪಾರಕ್ಕೆ ನಿರ್ಬಂಧ ಹಾಗೂ ಹಲಾಲ್ ವಿವಾದ ಸೃಷ್ಟಿಸುವವರಿಗೆ ಅಷ್ಟೊಂದು ಚಾಲೆಂಜ್ ಇದ್ದರೆ ಮುಸ್ಲಿಂ ದೇಶಗಳಿಂದ ಇಂಧನಗಳನ್ನು ಯಾಕೆ ಆಮದು ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಮಾತನಾಡುವವರು ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಬಂಗಾರವನ್ನು ಮುಸ್ಲಿಂ ದೇಶಗಳಿಂದ ತರಿಸ್ಕೋಬೇಡಿ ಎಂದು ಕಿಡಿಕಾರಿದ್ದಾರೆ.
ಟಿಪ್ಪು ಚರಿತ್ರೆ ಪಠ್ಯಪುಸ್ತಕದಿಂದ ತೆರವು ಚಿಂತನೆ ಹಿನ್ನೆಲೆಯಲ್ಲಿ ಹೋರಾಟಗಾರರು, ಸ್ವಾಮೀಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಪಠ್ಯಪುಸ್ತಕದಿಂದ ಟಿಪ್ಪು ಚರಿತ್ರೆ ತೆರವು ವಿಚಾರದಲ್ಲಿ ಮಾತನಾಡಿರುವ ಕಾಳಿಸ್ವಾಮಿ, ಪ್ರಮೋದ್ ಮುತಾಲಿಕ್, ಶಾಂತವೀರಸ್ವಾಮಿಗೂ ತಿರುಗೇಟು ನೀಡಿದರು.
ಟಿಪ್ಪು ಹೋರಾಟಗಾರ ಅಲ್ಲ ಅನ್ನೋರು ಯಾರು ಸ್ವಾಮೀಜಿಗಳಲ್ಲ. ರಾಜ್ಯದಲ್ಲಿ ಲಕ್ಷಾಂತರ ಬಡ ಮಕ್ಕಳಿಗೆ ತ್ರಿವಿಧ ದಾಸೋಹ ಮಾಡಿರುವ ಸ್ವಾಮೀಜಿಗಳಾಗಿದ್ದಾರೆ. ಅವರಲ್ಲಿ ಸಿದ್ದಗಂಗಾಶ್ರೀ, ಮುರುಘಾಶ್ರೀ, ಸುತ್ತೂರು ಶ್ರೀ, ಸಿರಿಗೆರೆ ಶ್ರೀಗಳು, ನಿಜವಾದ ಸ್ವಾಮೀಜಿಗಳೆನಿಸಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಇಂದು SSLC 2ನೇ ದಿನದ ಪರೀಕ್ಷೆ – ಇವತ್ತೂ ಹಿಜಬ್ಧಾರಿ ವಿದ್ಯಾರ್ಥಿನಿಯರು ಗೈರಾಗ್ತಾರಾ..?
ನಿಸ್ವಾರ್ಥ ಸೇವೆಯಿಂದ ವಿಶ್ವಕ್ಕೆ ಮಾದರಿ ಎನಿಸಿದ್ದಾರೆ. ಈ ದೇಶದಲ್ಲಿ ಪರಸ್ಪರ ಭಾವೈಕ್ಯತೆ ಮೆರೆಯುವವರೇ ನಿಜವಾದ ಶರಣರಾಗಿದ್ದಾರೆ. ಆದರೆ ವಿಷಬೀಜ ಬಿತ್ತಿ ಸ್ವಾಮೀಜಿಗಳ ಹೆಸರಿಗೆ ಕಳಂಕ ತರಬೇಡಿ. ಜೊತೆಗೆ ಎಲ್ಲಾ ಹಿಂದುಗಳು ಮುಸ್ಲಿಂರನ್ನು ವಿರೋಧಿಸುತ್ತಿಲ್ಲ. ನಿಜವಾದ ಹಿಂದೂಗಳು ದೇಶದ ಅಭಿವೃದ್ಧಿ ಬಗ್ಗೆ ಮಾತನಾಡ್ತಿದ್ದಾರೆ ಎಂದರು.
ಕೆಲವರು ಮಾತ್ರ ಮಂದಿರ, ಮಸೀದಿ, ಧರ್ಮದ ಬಗ್ಗೆ ವಿವಾದ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಹಲವರು ವಿವಿಧ ರೀತಿಯಲ್ಲಿ ಮನವಿ ಸಲ್ಲಿಸುತ್ತಾರೆ. ಆಗ ಅವರ ಮನವಿಯನ್ನು ಪರಿಶೀಲನೆ ನಡೆಸಬೇಕು. ಟಿಪ್ಪು ಅವರಂತಹ ಹೋರಾಟಗಾರರ ವಿಚಾರದಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು. ಟಿಪ್ಪು ಸ್ವತಂತ್ರ ಹೋರಾಟಗಾರ ಅನ್ನೋದನ್ನು ಮರೆಯಬಾರದು. ಹಾಗೆಯೇ ರಾಜ್ಯಸರ್ಕಾರ ಕಾನೂನು ಪಾಲಿಸಬೇಕು ಹೊರೆತು ವಿವಾದಕ್ಕೆ ಮಣೆ ಹಾಕಬಾರದು. ಸರ್ಕಾರಕ್ಕೆ ಗೌರವಿಸ್ತೇವೆ. ಸರ್ಕಾರದ ಕಾನೂನನ್ನು ನಾವು ಕೂಡ ಪಾಲಿಸುತ್ತೇವೆಂದು ತಿಳಿಸಿದರು. ಇದನ್ನೂ ಓದಿ: 8ನೇ ಬಾರಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ