ಕಾರವಾರ: ಜನವರಿ ನಂತರ ಬಿಜೆಪಿ ಸರ್ಕಾರ ಇರುವುದಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಭವಿಷ್ಯ ನುಡಿದಿದ್ದಾರೆ.
ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವನ್ನು ತೋರಿಸಿಕೊಂಡು ಮತ ಪಡೆಯುವ ಅತ್ಯಂತ ದುಸ್ಥಿತಿಗೆ ಬಿಜೆಪಿ ಹಾಗೂ ಇಲ್ಲಿನ ಸಂಸದರು ಬಂದಿದ್ದಾರೆ. ಪಾಕಿಸ್ತಾನದ ಪ್ರಧಾನಿಯವರ ಮೊಮ್ಮಗಳ ಹುಟ್ಟುಹಬ್ಬಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ಕಾಂಗ್ರೆಸ್ ಪ್ರಧಾನಿಯಲ್ಲ, ಬಿಜೆಪಿ ಪ್ರಧಾನಮಂತ್ರಿ ಎಂದು ವಾಗ್ದಾಳಿ ನಡೆಸಿದರು.
ರಾತ್ರಿ ಹಗಲು ಎನ್ನದೆ ಪಾಕಿಸ್ತಾನದ ಆಲೋಚನೆಯೇ ಹೊರತು ರಾಜ್ಯದ ಆಲೋಚನೆ ಬಿಜೆಪಿಗೆ ಇಲ್ಲ. ಚುನಾವಣೆ ಬಂದಾಗ ಪಾಕಿಸ್ತಾನವನ್ನು ಕಿಸೆಯಲ್ಲಿ ಇಟ್ಟುಕೊಂಡು ಅದರ ಬಗ್ಗೆ ಮಾತನಾಡುವ ಇವರಿಗೆ ಪಾಕಿಸ್ತಾನವೇ ಅತಿ ಹೆಚ್ಚು ಪ್ರೀತಿ. ಇಲ್ಲಿನ ಸಂಸದ ಅನಂತ್ ಕುಮಾರ್ ಹೆಗ್ಡೆ ಜನರಲ್ಲಿ ವೈಮನಸ್ಸು ತರಿಸಿ, ಸಮಾಜದಲ್ಲಿ ಬೆಂಕಿ ಹಚ್ಚಿ, ಭಯದ ವಾತಾವರಣ ನಿರ್ಮಾಣ ಮಾಡಿ ರಾಜಕೀಯ ಲಾಭ ಪಡೆದುದಲ್ಲದೇ ಕ್ಷೇತ್ರದ ಜನರ ನೋವಿಗೆ ಸ್ಪಂದಿಸುವ ಮನೋಭಾವವಿಲ್ಲ ಎಂದು ಕಿಡಿಕಾರಿದರು.
ಮಾತೇ ಬಂಡವಾಳವಾಗಿದೆ. ಅಂಬೇಡ್ಕರ್ಗೆ ಬೈಯುವ ಇವರಿಗೆ ಪಾರ್ಲಿಮೆಂಟಿನಲ್ಲಿ ಮಾತನಾಡುವ ಧಮ್ ಇಲ್ಲ. ಬೆಂಕಿ ಹಚ್ಚುವ ಕೆಲಸ ಬಂದ್ ಮಾಡಿ ಜನರ ಬಗ್ಗೆ ಮಾತನಾಡಲಿ. ಬಿಜೆಪಿಗರಿಗೆ ಬಾಯಲ್ಲಿ ಸ್ವದೇಶಿ, ಮನದಲ್ಲಿ ವಿದೇಶಿ. ಖಾಸಗೀಕರಣ ಮಾಡಲು ಹೊರಟಿದ್ದಾರೆ. ಬಿಜೆಪಿ ಭಾರತದ ಬಂಡವಾಳವನ್ನೇ ಅಡವಿಡಲು ಹೊರಟಿದೆ ಎಂದು ಗರಂ ಆದರು.