ಬೆಂಗಳೂರು: ನಾನು ನಿಲ್ಲುವುದಾದ್ರೆ ಅದು ಸಂಸದೆ ಸ್ಥಾನಕ್ಕೆ ಮಾತ್ರ ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ. ಈ ಮೂಲಕ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮಂಡ್ಯದಲ್ಲಿ ಮತ್ತೆ ಮನೆ ಮಾಡಿದ ಗುಟ್ಟು ರಟ್ಟಾಗಿದೆ.
ಹೌದು. ರಮ್ಯಾ ಅವರು ಈ ಮಾತನ್ನು ಯಾವುದೇ ಮಾಧ್ಯಮಕ್ಕೆ ಹೇಳಿಲ್ಲ. ಆದರೆ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳ ಜೊತೆ ಮಾತನಾಡುವ ವೇಳೆ ನಾನು ಸಂಸದೆ ಸ್ಥಾನಕ್ಕೆ ಮಾತ್ರ ಸ್ಪರ್ಧಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ ಎಂಬುದಾಗಿ ಮೂಲಗಳಿಂದ ಸಿಕ್ಕಿದೆ.
ಮಂಡ್ಯದಲ್ಲಿ ರಾಜಕೀಯ ಮಾಡುವುದಾದರೆ ಅದು ಸಂಸದೆಯಾಗಿ ಮಾತ್ರ. ಮುಂದಿನ ರಾಜಕೀಯ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೆಜ್ಜೆ ಹಾಕಲು ತೀರ್ಮಾನ ಕೈಗೊಂಡಿದ್ದೇನೆ. ಅಷ್ಟೇ ಅಲ್ಲದೇ ಸಂಸದೆಯಾಗಿಯೇ ಮುಂದೇ ಬರಲಿ ಎಂದು ಹೈಕಮಾಂಡ್ ಹೇಳಿದೆ ಎಂಬುದಾಗಿ ರಮ್ಯಾ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯ ವೇಳೆ ರಮ್ಯಾ ಅವರು ಮತ್ತೆ ಕರ್ನಾಟಕ ರಾಜಕರಾಣಕ್ಕೆ ಬರುತ್ತಾರೆ ಎನ್ನುವ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು. ಆದರೆ ಈಗ ಅಭಿಮಾನಿಗಳ ಜೊತೆ ತನ್ನ ಇಂಗಿತವನ್ನು ತಿಳಿಸಿದ ಕಾರಣ ರಮ್ಯಾ ರಾಷ್ಟ್ರ ರಾಜಕಾರಣದಲ್ಲೇ ಮುಂದುವರಿಯುವುದು ಸ್ಪಷ್ಟವಾಗಿದೆ.