ಕೊಪ್ಪಳ: ತನ್ನ ಪಾಲಿನ ಹಣ ಕೇಳಲು ಬಂದ ಭತ್ತದ ವ್ಯಾಪಾರಿಯನ್ನು ಪುರಸಭೆ ಸದಸ್ಯೆ ಹಾಗೂ ಅವರ ಸಂಬಂಧಿಕರು ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ.
ಕಾರಟಗಿ ಗ್ರಾಮದ ಅಮರಗುಂಡಪ್ಪ ಹಲ್ಲೆಗೊಳಗಾದ ವ್ಯಾಪಾರಿ. ಪುರಸಭೆ ಸದಸ್ಯೆ ಅನುಷಾ ಹಲ್ಲೆ ಮಾಡಿದವರು. ಅನುಷಾ ಪತಿ ಸುರೇಶ್ ಕುಳಗಿ ಹಾಗೂ ಅಮರಗುಂಡಪ್ಪ ಇಬ್ಬರು ಸೇರಿ ಭತ್ತದ ವ್ಯಾಪಾರ ಮಾಡುತ್ತಿದ್ದರು. ಇಬ್ಬರ ನಡುವೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ತನಗೆ ಕೊಡಬೇಕಾದ ಹಣವನ್ನು ನೀಡಬೇಕು ಎಂದು ಅಮರಗುಂಡಪ್ಪ ಪಟ್ಟು ಹಿಡಿದು ಅನುಷಾ ಅವರ ಮನೆ ಮುಂದೆ ನಿಂತಿದ್ದರು. ಇದರಿಂದ ಅಮರಗುಂಡಪ್ಪ ಹಾಗೂ ಅನುಷಾ ಕುಟುಂಬದವರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಹೀಗಾಗಿ ಅನುಷಾ ಹಾಗೂ ಅವರ ಸಂಬಂಧಿಕರು ಸೇರಿ ಅಮರಗುಂಡಪ್ಪರಿಗೆ ಮನ ಬಂದಂತೆ ಥಳಿಸಿದ್ದಾರೆ.
ಕಳೆದ ಸುಮಾರು ದಿನಗಳಿಂದ ಅಮರಗುಂಡಪ್ಪ ಹಾಗೂ ಸುರೇಶ್ ನಡುವೆ ಅನೇಕ ಬಾರಿ ಗಲಾಟೆಯಾಗಿತ್ತು. ಆದರೆ ಇಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಘಟನೆಯ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.