– ಪಕ್ಷ ಬಿಟ್ಟವರು ನಮ್ಮ ಮಿತ್ರರೇ
ಕಲಬುರಗಿ: ಎದುರಾಗಿರುವ ರಾಜಕೀಯ ಸನ್ನಿವೇಶಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐದು ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ. ಪಕ್ಷ ಬಿಟ್ಟವರು ನಮ್ಮ ಮಿತ್ರರೇ ಎಂದು ಕಾಂಗ್ರೆಸ್ ಶಾಸಕ, ಆನಂದ್ ಸಿಂಗ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅಷ್ಟೇ ಅಲ್ಲದೆ ಎದುರಾಗಿರುವ ರಾಜಕೀಯ ಸನ್ನಿವೇಶಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಎಲ್ಲರನ್ನ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ತೆರೆಮರೆಯಲ್ಲಿ ಸರ್ಕಾರನ್ನ ಕೆಡವಲು ಸಿದ್ದರಾಮಯ್ಯ ಅವರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವುದು ತಪ್ಪು. ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೂಡ ಅನೇಕರು ರಾಜೀನಾಮೆ ನೀಡಿದ್ದರೂ ಸರ್ಕಾರ ಬೀಳಲಿಲ್ಲ. ಅದರಂತೆ ಈಗಲೂ ಕೂಡ ಸರ್ಕಾರ ಬೀಳಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮಾತನಾಡಿ, ನಮ್ಮ ಸಂಪರ್ಕದಲ್ಲಿ ಕೂಡ ಬಿಜೆಪಿಯ ಅನೇಕ ಶಾಸಕರಿದ್ದಾರೆ. ಆದರೆ ನಾವಾಗಿಯೇ ಆಪರೇಷನ್ ಮಾಡಲು ಹೋಗಿಲ್ಲ ಎಂದು ಕಮಲಕ್ಕೆ ಟಾಂಗ್ ಕೊಟ್ಟಿದ್ದಾರೆ.