ಹಾಸನ: ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪುಸ್ತಕ ಪರಿಷ್ಕರಣೆಗೆ ಇನ್ನೂ ವಿರೋಧ ಮುಂದುವರಿದಿದ್ದು, ತಮ್ಮ ಕವಿತೆಯನ್ನು ಬೋಧಿಸಲು ಒಪ್ಪಿಗೆ ಇಲ್ಲ ಎಂದು ಸಾಹಿತಿ ರೂಪಾ ಹಾಸನ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಪಠ್ಯ ಪರಿಷ್ಕರಣೆ ವಿವಾದ ತಣ್ಣಗಾದ ಹಿನ್ನೆಲೆ ಹಾಗೂ ಈಗಾಗಲೇ ಪಠ್ಯಪುಸ್ತಕ ಮುದ್ರಣ ಆಗಿರುವ ಕಾರಣ ಸಾಹಿತಿ ರೂಪ ಹಾಸನ ರಚಿತ ಅಮ್ಮನಾಗುವುದೆಂದರೆ ಕವಿತೆ ಬೋಧನೆಗೆ ಅನುಮತಿ ನೀಡುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸಾಹಿತಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.
ಇದಕ್ಕೆ ರೂಪಾ ಹಾಸನ ಅವರು ತಮ್ಮ ಕವಿತೆಯನ್ನು ಬಳಸದಂತೆ ಮತ್ತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವ ಮೂಲಕ ಅಧಿಕಾರಿಗಳ ಮನವಿಯನ್ನು ಸ್ಪಷ್ಟವಾಗಿ ತಿರಸ್ಕಾರ ಮಾಡಿದ್ದಾರೆ. ಈ ಹಿಂದೆ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ತಮ್ಮ ಕವಿತೆ ಬಳಕೆಗೆ ನೀಡಿದ್ದ ಸಮ್ಮತಿಯನ್ನು ರೂಪಾ ಹಾಸನ ಹಿಂಪಡೆದಿದ್ದರು.