ಬೆಂಗಳೂರು: ರಾಜ್ಯದಲ್ಲಿ ಮಾಹಿತಿಯುಕ್ತ, ಗೌರವಯುತ ಮತ್ತು ದೃಢವಾದ ವೈವಾಹಿಕ ಸಂಬಂಧಗಳನ್ನ ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಜಂಟಿ ಸಹಯೋಗದಲ್ಲಿ ‘ತೇರೆ- ಮೇರೇ ಸಪ್ನೆ – ಕೂಡಿ ಬಾಳೋಣ’ ವಿವಾಹ ಪೂರ್ವ ಸಂವಹನ ಯೋಜನೆಯನ್ನ ಜಾರಿಗೆ ತಂದಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ಇಂದು ಬೆಂಗಳೂರಿನ ಜವಹರ್ ಬಾಲ ಭವನದಲ್ಲಿ ಆಯೋಜಿಸಲಾಗಿದ್ದ ಸಾಂತ್ವನ ಕೇಂದ್ರಗಳ ಸಲಹೆಗಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ವೇಗವಾಗಿ ಬದಲಾಗುತ್ತಿರುವ ಇಂದಿನ ಸಾಮಾಜಿಕ ಪರಿಸರದಲ್ಲಿ ಮದುವೆಗೆ ಮುನ್ನ ಯುವಜನರಲ್ಲಿ ಭಾವನಾತ್ಮಕ ಸಿದ್ಧತೆ, ಪರಸ್ಪರ ಗೌರವ ಹಾಗೂ ಧನಾತ್ಮಕ ಸಂವಹನ ಬೆಳೆಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ 178 ಸಾಂತ್ವನ ಕೇಂದ್ರಗಳ ಮೂಲಕ ವಿವಾಹ ಪೂರ್ವ ಸಂವಹನ ಕೇಂದ್ರಗಳನ್ನ (PMCC) ಸ್ಥಾಪಿಸುತ್ತಿದ್ದು, ಉಚಿತ ಸಮಾಲೋಚನೆ ಒದಗಿಸುವ ಮೂಲಕ ಕುಟುಂಬ ಸಂಸ್ಥೆಯನ್ನ ಬಲಪಡಿಸಲು ಈ ಯೋಜನೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ತಿಳಿಸಿದರು.
ಯುವಜನರು ಮದುವೆಗೂ ಮುನ್ನ ಅಗತ್ಯ ಜೀವನ ಕೌಶಲ್ಯಗಳನ್ನ ರೂಢಿಸಿಕೊಳ್ಳುವುದು, ಆರ್ಥಿಕ ಯೋಜನೆ ಮಾಡುವುದು ಹಾಗೂ ದೈನಂದಿನ ಕೌಟುಂಬಿಕ ಸಮಸ್ಯೆಗಳನ್ನ ಪ್ರಬುದ್ಧತೆಯಿಂದ ಪರಿಹರಿಸಿಕೊಳ್ಳಲು ಈ ಕೇಂದ್ರಗಳು ಮಾರ್ಗದರ್ಶನ ನೀಡಲಿವೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (NCW), ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ (KSWC) ನಡುವೆ ಮಹತ್ವದ ತಿಳಿವಳಿಕೆ ಒಡಂಬಡಿಕೆಗೆ (MoU) ಸಹಿ ಹಾಕಲಾಯಿತು.

ಯೋಜನೆಯ ಪ್ರಮುಖ ಉದ್ದೇಶಗಳು :
* ಆರೋಗ್ಯಕರ ವೈವಾಹಿಕ ಜೀವನ: ಮದುವೆಗೆ ಮುನ್ನ ನಿರೀಕ್ಷಿತ ದಂಪತಿಗಳ ನಡುವೆ ಪರಸ್ಪರ ತಿಳುವಳಿಕೆ, ಗೌರವ ಮತ್ತು ಭಾವನಾತ್ಮಕ ಸಿದ್ಧತೆಯನ್ನು ಬೆಳೆಸುವುದು.
* ಆರ್ಥಿಕ ಹಾಗೂ ಮಾನಸಿಕ ಜಾಗೃತಿ: ಜವಾಬ್ದಾರಿಗಳ ಹಂಚಿಕೆ, ಆರ್ಥಿಕ ನಿರ್ವಹಣೆ ಮತ್ತು ಉದ್ಭವಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆ ರಚನಾತ್ಮಕ ಸಮಾಲೋಚನೆ ನಡೆಸುವುದು.
* ಕಲಹಗಳ ತಡೆಗಟ್ಟುವಿಕೆ: ಪ್ರಬುದ್ಧ ಸಂವಾದ ಹಾಗೂ ವೃತ್ತಿಪರ ಮಾರ್ಗದರ್ಶನದ ಮೂಲಕ ಅನಗತ್ಯ ಕೌಟುಂಬಿಕ ಕಲಹಗಳನ್ನ ತಡೆದು, ಲಿಂಗ-ಸೂಕ್ಷ್ಮ ಕುಟುಂಬ ವ್ಯವಸ್ಥೆಯನ್ನು ನಿರ್ಮಿಸುವುದು.
* ಸಂಸ್ಥೆಗಳ ಜವಾಬ್ದಾರಿ ಹಂಚಿಕೆ: ಈ ಬೃಹತ್ ಯೋಜನೆಯನ್ನ ರಾಜ್ಯದಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮೂರೂ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯನ್ನು ಹಂಚಿಕೊಂಡಿವೆ.
ರಾಷ್ಟ್ರೀಯ ಮಹಿಳಾ ಆಯೋಗ (NCW):
ಯೋಜನೆಗೆ ಅಗತ್ಯವಾದ ಪ್ರಮಾಣೀಕೃತ ತರಬೇತಿ ಮಾಡ್ಯೂಲ್ಗಳನ್ನ ಪೂರೈಸುವುದು, ಮಾಸ್ಟರ್ ತರಬೇತುದಾರರಿಗೆ ತರಬೇತಿ ನೀಡಿ ಪ್ರಮಾಣಪತ್ರ ವಿತರಿಸುವುದು ಹಾಗೂ ರಾಷ್ಟ್ರೀಯ ಮಟ್ಟದ ಮೇಲ್ವಿಚಾರಣೆ ವಹಿಸುವುದು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:
ರಾಜ್ಯದ 178 ಸಾಂತ್ವನ ಕೇಂದ್ರಗಳನ್ನ ನಿರ್ವಹಿಸುವುದು ಹಾಗೂ ಸಾರ್ವಜನಿಕರಿಗೆ / ಫಲಾನುಭವಿಗಳಿಗೆ ಸಂಪೂರ್ಣ ಉಚಿತ ವಿವಾಹ ಪೂರ್ವ ಸಮಾಲೋಚನಾ ಸೇವೆಗಳನ್ನು ನೀಡುವುದು.

ಕರ್ನಾಟಕ ರಾಜ್ಯ ಮಹಿಳಾ ಆಯೋಗ (KSWC):
ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸುವುದು ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು.
ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಹೆಜ್ಜೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ವಿಜಯ ರಹತ್ಕರ್ ಅವರು ಮಾತನಾಡಿ, ಬಲವಾದ ಕುಟುಂಬಗಳ ನಿರ್ಮಾಣಕ್ಕೆ ಉತ್ತಮ ಸಂವಹನ ಮತ್ತು ನಂಬಿಕೆ ಅಡಿಪಾಯವಾಗಿದೆ. ಈ 178 ಕೇಂದ್ರಗಳ ಸೇರ್ಪಡೆಯೊಂದಿಗೆ, ಕರ್ನಾಟಕವು ದೇಶದಲ್ಲೇ ಅತಿ ದೊಡ್ಡ ಅನುಷ್ಠಾನ ರಾಜ್ಯಗಳಲ್ಲಿ ಒಂದಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ದೇಶದ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 285ಕ್ಕೂ ಹೆಚ್ಚು ಕೇಂದ್ರಗಳಿಗೆ ಮಾರ್ಗದರ್ಶನ ನೀಡಿದಂತಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ನಿರ್ದೇಶಕಿ ಸ್ನೇಹ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್. ರೂಪ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

