ಬೆಂಗಳೂರು: ನಾಗಮಂಗಲದ ಡಿಪೋದ ಕೆಎಸ್ಆರ್ಟಿಸಿ ಚಾಲಕನ (KSRTC Driver) ಆತ್ಮಹತ್ಯೆ ಯತ್ನ ಪ್ರಕರಣ ಸದನದಲ್ಲೂ ಇಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ವಿಷಯ ಪ್ರಸ್ತಾಪ ಮಾಡಿ ಎಫ್ಐಆರ್ ಕೂಡ ಹಾಕಿಲ್ಲ. ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಚಲುವರಾಯಸ್ವಾಮಿ (Chaluvaraya Swamy) ತಲೆದಂಡಕ್ಕೆ ಆಗ್ರಹಿಸಿದರು.
ಇದಕ್ಕೆ ಕುಮಾರಸ್ವಾಮಿಯೂ ದನಿಗೂಡಿಸಿ ಉಭಯ ಪಕ್ಷಗಳ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ಹಂತದಲ್ಲಿ ಚಲುವರಾಯಸ್ವಾಮಿ ಅವರನ್ನು ತಮ್ಮ ಬಳಿ ಕರೆಸಿಕೊಂಡ ಸಿಎಂ, ಏನೆಲ್ಲಾ ಆಯ್ತು ಎಂಬುದನ್ನು ತಿಳಿದುಕೊಂಡರು.
ತಮ್ಮ ಮೇಲಿನ ಆರೋಪ ನಿರಾಕರಿಸುತ್ತಾ ಕುಮಾರಸ್ವಾಮಿ (Kumaraswamy) ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿಗೆ ಇಳಿದರು. ಬೇಕಂತಲೇ ಮೈಸೂರಿಗೆ ಶಿಫ್ಟ್ ಮಾಡುವುದನ್ನು ಕುಮಾರಸ್ವಾಮಿ ತಡೆದರು. ರಾಜಕೀಯ ಲಾಭ ಪಡೆಯಲು ಯತ್ನಿಸಿದರು ಎಂದು ಆರೋಪಿಸಿದರು. ನಾವಿಲ್ಲಿ 135 ಮಂದಿ ಕುಳಿತಿರುವುದನ್ನು ಸಹಿಸಲು ಆಗುತ್ತಿಲ್ಲ. ನಾಚಿಕೆ ಆಗಬೇಕು ನಿಮಗೆ. ಕುಳಿತುಕೊಳ್ಳಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಇದಕ್ಕೆ ಕೆರಳಿದ ಕುಮಾರಸ್ವಾಮಿ, ನಮಗೆ ಯಾಕೆ ನಾಚಿಕೆ? ನೀನು ಕೂರಯ್ಯ ಎಂದರು. ನಂತರ ನಿಮ್ಮನ್ನು ಸಿಎಂ ಮಾಡಿದ್ದು ಯಾರು ಅಂತಾ ಚಲುವರಾಯಸ್ವಾಮಿ ಮತ್ತೆ ಕೆಣಕಿದರು. ಆಗ ಪರಸ್ಪರರು ಏಕವಚನಗಳ ಪ್ರಯೋಗ ಮಾಡಿಕೊಂಡರು. ಇದನ್ನೂ ಓದಿ: ಸದನದಲ್ಲಿ ಸಿದ್ದರಾಮಯ್ಯ-ಹೆಚ್ಡಿಕೆ ಮಧ್ಯೆ ಬೆಂಕಿ ಫೈಟ್
ಈ ಸಂದರ್ಭದಲ್ಲಿ ಮಾನ ಮರ್ಯಾದೆ, ಕೊಲೆಗಡುಕ, ಕಿತ್ತುಹೋದವರು, ಹೀಗೆ ಅನೇಕ ಪದಪುಂಜಗಳ ಬಳಕೆಯೂ ಆಯ್ತು. ಕಾಂಗ್ರೆಸ್ಸಿಗರು-ಜೆಡಿಎಸ್ನವರು ಸಿಟ್ಟಿಗೆದ್ದ ಕಾರಣ ಗದ್ದಲ ಜೊರಾಯ್ತು.
ಚಲುವರಾಯಸ್ವಾಮಿ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿ ಜೆಡಿಎಸ್-ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕೊನೆಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತನಿಖೆ ನಡೆಸುವುದಾಗಿ ಗೃಹಸಚಿವರು ಭರವಸೆ ನೀಡಿದ ಬಳಿಕ ವಿಪಕ್ಷಗಳು ಧರಣಿ ಹಿಂಪಡೆದವು.