ಕೊಪ್ಪಳ: ಅವರಿಬ್ಬರೂ ಪ್ರತಿಭಾವಂತ ಹೆಣ್ಣು ಮಕ್ಕಳು. ಯಾವುದೇ ಟ್ಯೂಷನ್ಗೆ ಹೋಗ್ದೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರು. ಆದ್ರೆ ಮುಂದೆ ಓದೋಕೆ ಇವ್ರಿಗೆ ಆರ್ಥಿಕ ತೊಂದರೆ ಎದುರಾಗಿದೆ. ಕಾಲೇಜು ಫೀಸ್ ಕಟ್ಟೋಕಾಗದೆ ಮುಂದಿನ ಭವಿಷ್ಯ ಕಮರಿಹೋಗುತ್ತೆ ಅನ್ನೋ ಆತಂಕದಲ್ಲಿದ್ದಾರೆ. ಬಡತನದಲ್ಲಿ ಅರಳಿದ ಪ್ರತಿಭೆಗಳು ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ನಿರೀಕ್ಷೆಯಲ್ಲಿದ್ದಾರೆ.
ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಬರಗೂರು ಗ್ರಾಮದ ನಿವಾಸಿ ಮರಿಯಪ್ಪ ಅನ್ನೋವ್ರ ಮುದ್ದಾದ ಮಕ್ಕಳು. ಮರಿಯಪ್ಪರಿಗೆ ಕಡು ಬಡತನ, ಇವ್ರಿಗೆ 6 ಜನ ಮಕ್ಕಳು. ಇದರಲ್ಲಿ ನಾಲ್ವರು ಹೆಣ್ಣು ಮಕ್ಕಳಿದ್ರೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ತಮಗೆ ಇರೋ ಅಲ್ಪ ಸ್ವಲ್ಪ ಜಮೀನನಿನಲ್ಲಿ ಕಡು ಕಷ್ಟದ ಜೀವನ ಬಂಡಿಯನ್ನು ನೂಕ್ತಿದ್ದಾರೆ. ದೊಡ್ಡ ಮಗಳು ಪದವಿ ವ್ಯಾಸಂಗ ಮಾಡ್ತಿದ್ದಾಳೆ. ಇನ್ನೂ ಇಬ್ಬರು ಮಕ್ಕಳು ಈ ವರ್ಷ ಬರಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಉತ್ತಮ ಅಂಕಗಳಿಸಿದ್ದಾರೆ. ಯಮನಮ್ಮ ಅನ್ನೋ ವಿದ್ಯಾರ್ಥಿನಿ 594 ಅಂಕ ಗಳಿಸಿದ್ರೆ, ಅಕ್ಕದೇವಮ್ಮ 463 ಅಂಕ ಗಳಿಸಿದ್ದಾಳೆ. ಯಾವುದೇ ಟ್ಯುಷನ್ಗೆ ಹೋಗದೇ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇವರಿಬ್ಬರು ಶಾಲೆಯ ರಜಾ ಅವಧಿಯಲ್ಲಿ ಕೂಲಿ ಕೆಲಸ ಮಾಡಿ ತಂದೆಯ ಕಷ್ಟಕ್ಕೆ ಸಾಥ್ ನೀಡಿದ್ದಾರೆ. ಇಷ್ಟೊಂದು ಸಾಧನೆ ಮಾಡಿದ್ರೂ ಬಡತನದಿಂದ ಮುಂದಿನ ಓದಿಗೆ ಅಡ್ಡಿಯಾಗಿದೆ ಅಂತಾರೆ ಯಮನಮ್ಮ.
ಮರಿಯಪ್ಪ ಅಲ್ಪ ಸ್ವಲ್ಪ ಭೂಮಿಯಲ್ಲಿ ವ್ಯವಸಾಯ ಮಾಡಿ ತಮ್ಮ ಮಕ್ಕಳಿಗೆ ವಿದ್ಯಾಭಾಸ ಕಲಿಸುತ್ತಿದ್ದಾರೆ. ಈಗ ದೊಡ್ಡ ಮಗಳು ಪದವಿ ಕಲಿಯುತ್ತಿದ್ದಾರೆ. ಇನ್ನೂ ಈಗ ಎಸ್ಎಸ್ಎಲ್ಸಿಯಲ್ಲಿ ಇಬ್ಬರು ಮಕ್ಕಳು ಉತ್ತಮ ಅಂಕಗಳಿಸಿದ್ದಾರೆ. ಆದ್ರೆ ಮುಂದೆ ಪಿಯುಸಿಗೆ ಸೇರಿಸಲು ಇವರ ಬಳಿ ಹಣವಿಲ್ಲ. ಜೊತೆಗೆ ಜಮೀನಿನಲ್ಲಿ ಸಾಲ ಮಾಡಿ ಕೊಳವೆ ಬಾವಿ ಹಾಕಿಸಿದ್ದಾರೆ. ಇದ್ರಿಂದ ಮರಿಯಪ್ಪ ಈ ಮಕ್ಕಳ ಓದಿಗೆ ಬ್ರೇಕ್ ಹಾಕಲು ಚಿಂತಿಸಿದ್ದಾರೆ. ಆದ್ರೆ ಮಕ್ಕಳು ಮಾತ್ರ ನಾವು ಓದಬೇಕು ಎನ್ನುತ್ತಿದ್ದಾರೆ. ಮತ್ತೆ ಮಕ್ಕಳಿಗೆ ಹೇಗೆ ಓದಿಸ ಬೇಕು ಎಂದು ಕಂಗಾಲಾಗಿದ್ದಾರೆ. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ನೆರವು ಕೇಳುತ್ತಿದ್ದಾರೆ.
https://www.youtube.com/watch?v=Drx0lVtn_zw