ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ (PA) ಚಂದ್ರನಾಥ್ ರಾತ್ (Chandranath Rath) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಪ್ರಮುಖ ಶೂಟರ್ ರಾಜ್ಕುಮಾರ್ ಸಿಂಗ್ ಎಂಬಾತನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದೆ.
ಮುಜಾಫರ್ನಗರದ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿರುವ ಛಾಪರ್ ಟೋಲ್ ಪ್ಲಾಜಾ ಬಳಿ ಸಿಬಿಐ ಅಧಿಕಾರಿಗಳು ಮತ್ತು ಉತ್ತರ ಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ. ಈತ ಈ ಕೊಲೆ ಪ್ರಕರಣದಲ್ಲಿ ನೇರವಾಗಿ ಗುಂಡು ಹಾರಿಸಿದ ಪ್ರಮುಖ ಶಾರ್ಪ್ ಶೂಟರ್ಗಳಲ್ಲಿ ಒಬ್ಬನೆಂದು ಶಂಕಿಸಲಾಗಿದೆ.
ಸಿಬಿಐ ಈಗಾಗಲೇ ಈತನ ಟ್ರಾನ್ಸಿಟ್ ರಿಮಾಂಡ್ (Transit Remand) ಪಡೆದುಕೊಂಡಿದ್ದು, ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.
ಚಂದ್ರನಾಥ್ ರಾತ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ಬಳಿಕ ನಡೆದ ಅತ್ಯಂತ ದೊಡ್ಡ ಬಂಧನ ಇದಾಗಿದೆ. ಇದಕ್ಕೂ ಮುನ್ನ ರಾಜ್ಯ ಪೊಲೀಸರ ವಿಶೇಷ ತಂಡ (SIT) ಯುಪಿ ಮತ್ತು ಬಿಹಾರದಲ್ಲಿ ದಾಳಿ ನಡೆಸಿ ರಾಜ್ ಸಿಂಗ್, ಮಯಾಂಕ್ ರಾಜ್ ಮಿಶ್ರಾ ಮತ್ತು ವಿಕ್ಕಿ ಮೌರ್ಯ ಎಂಬ ಮೂವರನ್ನು ಬಂಧಿಸಿತ್ತು.
Muzaffarnagar, Uttar Pradesh: A key accused in the Chandranath Rath (PA to West Bengal CM Suvendu Adhikari) murder case, Rajkumar Singh of Ballia, has been arrested by the Central Bureau of Investigation from Chapar Toll Plaza on the Delhi-Dehradun Highway. pic.twitter.com/M36hxmcDtM
— IANS (@ians_india) May 18, 2026
ಪ್ರಸ್ತುತ ಸಿಬಿಐ ಈ ಕೊಲೆಯ ಹಿಂದಿರುವ ಮಾಸ್ಟರ್ಮೈಂಡ್ ಹಾಗೂ ರಾಜಕೀಯ ಪಿತೂರಿಯನ್ನು ಭೇದಿಸಲು ರಾಜ್ಕುಮಾರ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದೆ.
ಏನಿದು ಹತ್ಯೆ ಕೇಸ್?
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡೇ ದಿನಗಳಲ್ಲಿ (ಮೇ 6) ರಂದು ಚಂದ್ರನಾಥ್ ರಾತ್ ಅವರನ್ನು ಹತ್ಯೆ ಮಾಡಲಾಗಿತ್ತು. ಕೋಲ್ಕತ್ತಾ ವಿಮಾನ ನಿಲ್ದಾಣದ ಸಮೀಪವಿರುವ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ಎಂಬಲ್ಲಿ ಅವರ ಮನೆಯಿಂದ ಕೇವಲ 170 ಮೀಟರ್ ದೂರದಲ್ಲಿ ಈ ದಾಳಿ ನಡೆದಿತ್ತು.
ಚಂದ್ರನಾಥ್ ರಾತ್ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ, ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಕಾರು ಮತ್ತು ಬೈಕ್ಗಳಲ್ಲಿ ಬಂದ ವೃತ್ತಿಪರ ಶೂಟರ್ಗಳು ಅವರ ವಾಹನವನ್ನು ಅಡ್ಡಗಟ್ಟಿ ಕಾರಿನ ಕಿಟಕಿಯ ಮೂಲಕ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಗುಂಡು ತಗುಲಿದ್ದರಿಂದ ಚಂದ್ರನಾಥ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು ಮತ್ತು ಅವರ ಕಾರು ಚಾಲಕ ಬುದ್ಧದೇವ್ ಬೆರಾ ತೀವ್ರವಾಗಿ ಗಾಯಗೊಂಡಿದ್ದರು.

