ರಾಯಚೂರು: ರಾಜ್ಯದಲ್ಲಿ ಹಿಜಬ್-ಕೇಸರಿ ಶಾಲು ವಿವಾದ ಹಿನ್ನೆಲೆ ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆಯಿಂದ ಪ್ರತಿಭಟನೆಗಳು ನಿಂತಿವೆ. ಮುಸ್ಲಿಂ ಸಮುದಾಯದ ಮುಖಂಡರು, ಮೌಲಾನಾಗಳ ಜೊತೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತುರ್ತು ಸಭೆ ನಡೆಸಿ ನ್ಯಾಯಾಲಯದ ಮಧ್ಯಂತರ ಆದೇಶದ ಬಗ್ಗೆ ಮನವರಿಕೆ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಹಿಜಬ್ ವಿಚಾರ ಜೋರಾಗಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಈ ಕುರಿತು ಅಂತಿಮ ಆದೇಶ ಬರೋವರೆಗೂ ಕಾಯುವಂತೆ ಧರ್ಮಗುರುಗಳು, ಮುಖಂಡರ ಮೂಲಕ ಸಮುದಾಯದವರಿಗೆ ತಿಳಿ ಹೇಳಲು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆ ಹಿಜಬ್ ಎಲ್ಲಿಯೂ ಪ್ರತಿಭಟನೆ ನಡೆಸದಿರಲು ತೀರ್ಮಾನ ಮಾಡಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ – IPS ಅಧಿಕಾರಿ ಅರೆಸ್ಟ್
ರಾಯಚೂರು ಜಿಲ್ಲೆಯಲ್ಲಿ ಯಾವುದೇ ಸಂಘರ್ಷ ಇಲ್ಲ. ಜಿಲ್ಲೆಯಾದ್ಯಂತ ಶಾಂತವಾಗಿದೆ. ಎಲ್ಲ ಧಾರ್ಮಿಕ ಮುಖಂಡರು ಕೋರ್ಟ್ ಆದೇಶಕ್ಕೆ ಸಹಕಾರ ಮಾಡಿದ್ದಾರೆ ಎಂದು ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದ್ದಾರೆ. ಎಲ್ಲ ಮಕ್ಕಳು ಶಾಲಾ-ಕಾಲೇಜಿಗೆ ಹೋಗುತ್ತಿದ್ದಾರೆ. ಕೆಲವರು ಸಂಘರ್ಷದ ಲಾಭಗಳಿಸಲು ಹೋಗಿ ವಿಫಲವಾಗಿದ್ದಾರೆ. ಕಾಲೇಜುಗಳ ಬಳಿ ಸಮಾಜ ವಿರೋಧಿ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಎಚ್ಚರಿಕೆ ಕೊಟ್ಟಿದ್ದಾರೆ.