ಉಡುಪಿ: 70ನೇ ಗಣರಾಜ್ಯೋತ್ಸವವನ್ನು ಉಡುಪಿಯಲ್ಲೂ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಧ್ವಜಾರೋಹಣ ಮಾಡಿದ್ದಾರೆ. ಗಣರಾಜ್ಯೋತ್ಸವ ಮೈದಾನದಲ್ಲಿ ಸುಲ್ತಾನನ ರಾಜನಡೆ ಎಲ್ಲರ ಗಮನ ಸೆಳೆಯಿತು.
ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ ತಿರಂಗ ಧ್ವಜ ಹಾರಿಸುವ ಮೂಲಕ ಉಡುಪಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ವಿವಿಧ ತಂಡಗಳ ಶಿಸ್ತು ಬದ್ಧ ಆಕರ್ಷಕ ಪಥಸಂಚಲನ ನಡೆಯಿತು. ಸಚಿವರು ತೆರೆದ ವಾಹನದಲ್ಲಿ ನಿಂತು ಗೌರವ ಸ್ವೀಕರಿಸಿದರು. ಈ ಸಂದರ್ಭ ರಾಯಚೂರಿನಲ್ಲಿ ನಡೆದ ಪಶುಮೇಳದ ಚಾಂಪಿಯನ್ ಒಂಗೋಲ್ ತಳಿಯ ಹೋರಿಯ ಪ್ರದರ್ಶನ ನಡೆಯಿತು.
ದಷ್ಟ ಪುಷ್ಟ ಹೋರಿ, ಅದರ ಮೇಲೆ ಕುಳಿತು ಬಂದ ಪುಟ್ಟ ಪೋರ ಫೈಜಾನ್ ಎಲ್ಲರ ಗಮನ ಸೆಳೆದರು. ಮೈದಾನಕ್ಕೆ ತ್ರಿವರ್ಣ ಧ್ವಜ ಹಿಡಿದು ಒಂದು ಸುತ್ತು ಬಂದ ಮನಾಮಾ ಫಾರ್ಮ್ ಹೌಸ್ ತಂಡ, ಚಾಂಪಿಯನ್ ಪಟ್ಟ ಸಿಕ್ಕ ಸಂದರ್ಭದ ಮೆಡಲ್ ಮತ್ತು ಟ್ರೋಫಿಯನ್ನು ಪ್ರದರ್ಶನ ಮಾಡಿತು.
ಆರು ವರ್ಷ ವಯಸ್ಸಿನ ಸುಲ್ತಾನ 1,462 ಕಿಲೋ ತೂಗುತ್ತಾನೆ. ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ 3,000 ಜಾನುವಾರುಗಳು, 200 ಗೂಳಿಗಳನ್ನು ಹಿಂದಿಕ್ಕಿ ಚಾಂಪಿಯನ್ ಪಟ್ಟ ಪಡೆದುಕೊಂಡಿತ್ತು. ಉಡುಪಿಯ ಉಪ್ಪಿನ ಕೋಟೆಯ ಮನಮ ಫಾರ್ಮ್ ಹೌಸ್ ನ ಇರ್ಷಾದ್ ಮಾತನಾಡಿ, ಫಾರ್ಮ್ ಹೌಸ್ ನಲ್ಲಿ ಮೂವತ್ತು ತಳಿಗಳು ನಮ್ಮಲ್ಲಿದೆ. ನಾಲ್ಕು ಭಾರತೀಯ ತಳಿಗಳನ್ನು ಬೆಳೆಸುತ್ತಿದ್ದೇವೆ. ಸುಲ್ತಾನ್ ನೋಡಲು ಮಾತ್ರ ದೈತ್ಯ ಆದ್ರೆ ಬಹಳ ಸಾಧು ಸ್ವಭಾವದವ ಎಂದು ಹೇಳಿದರು.
ಇಂದಿನ ಗಣರಾಜ್ಯೋತ್ಸವದ ಆಕರ್ಷಣೆ ಕೇಂದ್ರಬಿಂದುವಾಗಿದ್ದ ಸುಲ್ತಾನನ ಜೊತೆ ನೂರಾರು ಜನ ಸೆಲ್ಫಿ ಕ್ಲಿಕ್ಕಿಸಿಕೊಂಡರು. 9ರ ಬಾಲಕ ಫೈಜಾನ್ ಸುಲ್ತಾನನಿಗೆ ಮೂಗುದಾರ ಹಾಕಿ ಸುತ್ತಾಡಿಸುತ್ತಿದ್ದುದನ್ನು ಕಂಡು ಜನ ಮೂಗಿನ ಮೇಲೆ ಬೆರಳಿಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv