ಬೆಂಗಳೂರು: ರಾಜ್ಯದಲ್ಲಿ ಎರಡು ಮೂರು ವಾರಗಳಲ್ಲಿ ಕೊರೊನಾ ಮೂರನೇ ಅಲೆ ಕಡಿಮೆಯಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಬಿಟ್ಟು ಶೇ.32ರಷ್ಟು ಹೊರ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಗಿದೆ. ಕಳೆದ ವಾರ ಶೇ.22ರಷ್ಟು ಕೊರೊನಾ ಪ್ರಕರಣಗಳಿತ್ತು. ಆದರೆ ಈಗ ಶೇ. 10ರಷ್ಟು ಹೆಚ್ಚಾಗಿದೆ. ಮುಖ್ಯವಾಗಿ ಗಮನಿಸಬೇಕಾದ ವಿಚಾರ ಎಂದರೆ ಆಸ್ಪತ್ರೆಗೆ ಸೇರುವವರು ಸಹ ಕಡಿಮೆ ಇದ್ದಾರೆ. 3,442 ಮಂದಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 1,788 ಮಂದಿ ಸೇರಿದ್ದಾರೆ. ಒಟ್ಟು 5,230 ಜನ ಆಸ್ಪತ್ರೆಗಳಲ್ಲಿದ್ದಾರೆ. ರಾಜ್ಯದಲ್ಲಿ 3,62,480 ಸಕ್ರಿಯ ಪ್ರಕರಣಗಳಿದೆ. 2-3 ವಾರಗಳಲ್ಲಿ 3 ನೇ ಅಲೆ ಕಡಿಮೆ ಆಗುತ್ತದೆ. ಜನರು ಮಾರ್ಗಸೂಚಿ ಪಾಲನೆ ಮಾಡಬೇಕು. ಲಸಿಕೆ ಹಾಕಿಸಿ ಕೊಳ್ಳಬೇಕು. ಎರಡು ಡೋಸ್, ಮೂರು ಡೋಸ್ ಪಡೆದಿರುವುದರಿಂದ ಹೆಚ್ಚು ತೊಂದರೆ ಆಗುವುದಿಲ್ಲ. ನಮ್ಮ ಜನರಲ್ಲಿ ರೋಗ ನಿರೋಧಕ ಶಕ್ತಿ ಬಂದಿದೆ. ಜನ 2-3 ವಾರ ನಮ್ಮ ಜೊತೆ ಸಹಕಾರ ಕೊಡಬೇಕು ಎಂದಿದ್ದಾರೆ.
ಜನವರಿ 28ಕ್ಕೆ ಸಿಎಂ ಅಧಿಕಾರ ಪಡೆದು 6 ತಿಂಗಳಾಗುತ್ತದೆ. ನಮ್ಮ ಆರೋಗ್ಯ ಇಲಾಖೆ ವಿಷನ್ ಡಾಕ್ಯುಮೆಂಟ್ ರೆಡಿ ಮಾಡುತ್ತಿದೆ. 20-30 ವರ್ಷಗಳ ಆರೋಗ್ಯ ಸೇವೆಗಾಗಿ ಈ ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡುತ್ತೇವೆ. ಡಾ.ಗುರುರಾಜ್ ಅಧ್ಯಕ್ಷತೆಯಲ್ಲಿ ಟೀಂ ರಚನೆ ಮಾಡಲಾಗಿತ್ತು. 750 ಜನ ತಜ್ಞರು ವಿಷನ್ ಡಾಕ್ಯುಮೆಂಟ್ನಲ್ಲಿ ಕೆಲಸ ಮಾಡಿದ್ದಾರೆ. 28ಕ್ಕೆ ಸಿಎಂ ಇದನ್ನು ಅನಾವರಣ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವಲಸಿಗರು ಮತ್ತೆ ಕಾಂಗ್ರೆಸ್ ಹೊಗುತ್ತಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅನಿಸಿಕೆ. ಅದು ಯಾರು, ಯಾರು ಹೋಗುತ್ತಾರೆ ಅವರನ್ನೇ ಕೇಳಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲೇ ವೈಭೋಗ – ಜೆಸಿಬಿ ನಾರಾಯಣನ ರಾಯಲ್ ಜೈಲ್ ಲೈಫ್ ಸ್ಟೋರಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೆಂಟ್ರಲ್ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಗೃಹ ಸಚಿವರ ಗಮನಕ್ಕೆ ಇದನ್ನು ತರುತ್ತೇನೆ ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಮತ್ತು ಸಿಎಂ ಈ ತೀರ್ಮಾನ ಮಾಡಿದ್ದಾರೆ. ಹೈಕಮಾಂಡ್, ಸಿಎಂ ನಿರ್ಧಾರಕ್ಕೆ ನಾನು ಬದ್ಧ. ಇದು ಪಕ್ಷದ ಆಂತರಿಕ ವಿಚಾರ. ಹೀಗಾಗಿ ನಮ್ಮ ಸಲಹೆ, ಅಭಿಪ್ರಾಯ ಪಕ್ಷದ ವೇದಿಕೆಯಲ್ಲಿ ಹೇಳುತ್ತೇವೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ