ವಿಜಯಪುರ: ವಿಜಯಪುರ ಹಾಗೂ ಅಥಣಿ ನಡುವಿನ ರಾಜ್ಯ ಹೆದ್ದಾರಿಯಲ್ಲಿನ ಸೇತುವೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ರತ್ನಾಪೂರ ಗ್ರಾಮದ ಬಳಿ ನಡೆದಿದೆ.
ವಿಜಯಪುರ ಹಾಗೂ ಅಥಣಿ ನಡುವಿನ ರಾಜ್ಯ ಹೆದ್ದಾರಿಯ ರತ್ನಾಪುರ ಗ್ರಾಮದ ಬಳಿಯಿರುವ ಸೇತುವೆಯೊಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಕುಸಿದು ಬಿದ್ದಿದೆ. ಸೇತುವೆ ಕುಸಿದು ಬೀಳುವ ವೇಳೆ ಯಾವುದೇ ವಾಹನಗಳು ಸಂಚರಿಸದೇ ಇರುವುದರಿಂದ ಆಗಬಹುದಾಗಿದ್ದ ಭಾರೀ ಅನಾಹುತವೊಂದು ಕ್ಷಣಮಾತ್ರದಲ್ಲಿ ತಪ್ಪಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಾಜ್ಯ ಹೆದ್ದಾರಿ ಮಾರ್ಗವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಈ ಮಾರ್ಗದ ಬದಲಾಗಿ ರತ್ನಾಪೂರ ಹಾಗೂ ತಿಕೋಟ ಮಾರ್ಗವಾಗಿ ಸಂಚಾರವನ್ನು ಬದಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಮಾಹಿತಿಗಳ ಪ್ರಕಾರ ಸೇತುವೆ 2002 ರಲ್ಲಿ ನಿರ್ಮಾಣವಾಗಿತ್ತು. ಆದರೆ ನಿರ್ಮಾಣವಾದ 16 ವರ್ಷದಲ್ಲೇ ಕುಸಿದು ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸೇತುವೆ ಕುಸಿದ ಪರಿಣಾಮ ವಾಹನ ಸವಾರು ಹಾಗೂ ಸ್ಥಳೀಯರು ತೀವ್ರ ಪರದಾಟ ನಡೆಸಿದ್ದಾರೆ. ಅಲ್ಲದೇ ಸೇತುವೆ ಕುಸಿದ ಪರಿಣಾಮ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv