ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಇದೀಗ ಮತ್ತೊಬ್ಬ ಕಲಾವಿದನನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಅನಿರುದ್ಧ ಅವರಿಂದ ತೆರುವಾದ ಆರ್ಯವರ್ಧನ್ ಪಾತ್ರವನ್ನು ಕನ್ನಡದ ಪ್ರತಿಭಾವಂತ ನಟ ಹರೀಶ್ ರಾಜ್ ಮಾಡಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ವಾಹಿನಿಯಾಗಲಿ, ಧಾರಾವಾಹಿಯ ನಿರ್ಮಾಪಕರಾಗಿ ಈ ಸುದ್ದಿಯನ್ನು ಖಚಿತ ಪಡಿಸದೇ ಇದ್ದರೂ, ಹರೀಶ್ ರಾಜ್ ಅವರೇ ಈ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಈ ಮೊದಲ ಆರ್ಯವರ್ಧನ್ ಪಾತ್ರವನ್ನು ಅನೂಪ್ ಭಂಡಾರಿ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಾರಣದಿಂದಾಗಿ ಒಪ್ಪಿಕೊಳ್ಳಲಿಲ್ಲ. ಆನಂತರ ಸುನೀಲ್ ಪುರಾಣಿಕ್ ಹೆಸರು ಓಡಾಡಿತು. ಕೆಲವರು ತಮಾಷೆಗೆ ಎನ್ನುವಂತೆ ಮಾಜಿ ಸಚಿವ ಸಿ. ಟಿ . ರವಿಯನ್ನು ಆಯ್ಕೆ ಮಾಡಿ ಎಂದು ಕಾಮೆಂಟ್ ಮಾಡಿದ್ದರು. ಆದರೆ, ವಾಹಿನಿಯು ಹಲವರಿಗೆ ಗಾಳಹಾಕಿತ್ತು. ಅದರಲ್ಲಿ ಹರೀಶ್ ರಾಜ್ ಹೆಸರು ಕೂಡ ಇತ್ತು. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ
ಸುನೀಲ್ ಪುರಾಣಿಕ್ ಮತ್ತು ಹರೀಶ್ ರಾಜ್ ಹೆಸರು ಸದ್ಯ ವಾಹಿನಿಯ ಮುಂದೆ ಇದೆ. ಬಹುತೇಕ ಸುನೀಲ್ ಪುರಾಣಿಕ್ ಅವರೇ ಈ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಹರೀಶ್ ರಾಜ್ ಹೆಸರೂ ಕೇಳಿ ಬರುತ್ತಿದೆ. ನಿನ್ನೆಗೆ ಅನಿರುದ್ಧ ಮಾಡಿದ ದೃಶ್ಯಗಳು ಮುಗಿದಿರುವ ಕಾರಣದಿಂದಾಗಿ ಜರೂರಾಗಿ ಪಾತ್ರಧಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಪಕರ ಮುಂದಿದೆ. ಇವತ್ತು ಅಥವಾ ನಾಳೆ ಪಾತ್ರಧಾರಿಯ ಹೆಸರು ಪಕ್ಕಾ ಆಗಲಿದೆ.