ಬೆಂಗಳೂರು: ಪಕ್ಷ ಸಂಘಟನೆಗೆ ಮುಂದಾಗಿರುವ ಮಾಜಿ ಸಿಎಂ, ಕಾಂಗ್ರೆಸ್ ಸಿಎಲ್ಪಿ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಒಂದು ಅಸ್ತ್ರದ ಮೂಲಕ ಎರಡು ಗುರಿ ತಲುಪಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಹೊಸ ದಾಳದ ಮೂಲಕ ಕೆಲವರಿಗೆ ಶಾಕ್ ನೀಡಲು ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಿಟರ್ನ್ ಆಫರ್:
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ಸಿದ್ದರಾಮಯ್ಯ ಆಫರ್ ನೀಡಿದ್ದಾರಂತೆ. ಈಗಾಗಲೇ ಯೋಗೇಶ್ವರ್ ಜೊತೆ ಸಿದ್ದರಾಮಯ್ಯರ ಅಣತಿಯಂತೆ ಆಪ್ತ ಚಲುವರಾಯ ಸ್ವಾಮಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಯೋಗೇಶ್ವರ್, ಮಂತ್ರಿ ಮಾಡ್ತೀನಿ ಎಂದು ಆಪರೇಷನ್ ಕಮಲಕ್ಕೆ ನನ್ನನ್ನು ಬಳಸಿಕೊಂಡರು. ಬಿಜೆಪಿಗೆ ಸೇರಿದ್ದಾಗಿದೆ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಹೋಗುತ್ತಿರಬೇಕು. ಮತ್ತೆ ಕಾಂಗ್ರೆಸ್ಗೆ ಬರೋಣ ಅಂದ್ರೆ ಡಿಕೆ ಬ್ರದರ್ಸ್ ಭಯವಿದೆ. ನನಗೂ ಒಳ್ಳೆಯ ಕಾಲ ಬರುತ್ತೆ, ನನ್ನನ್ನು ಬಿಟ್ಟು ಬಿಡಿ ಎಂದು ಸಿದ್ದರಾಮಯ್ಯರ ಆಫರ್ ತಿರಸ್ಕರಿದ್ದಾರೆ ಎಂದು ತಿಳಿದು ಬಂದಿದೆ.
ಸಿಪಿವೈ ಅಸ್ತ್ರ ಯಾಕೆ?
ಸಿ.ಪಿ.ಯೋಗೇಶ್ವರ್ ಮತ್ತೆ ಕಾಂಗ್ರೆಸ್ ಗೆ ಬಂದರೆ ಪರೋಕ್ಷವಾಗಿ ರಾಮನಗರದ ಭಾಗದಲ್ಲಿ ಡಿ.ಕೆ.ಸಹೋದರರ ವಿರುದ್ಧ ಪ್ರಬಲ ನಾಯಕನನ್ನು ಕರೆ ತಂದಂತಾಗುತ್ತದೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸುವ ರಾಮನಗರದ ಪ್ರಬಲ ನಾಯಕರಾಗಿರುವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾದ್ರೆ ಬಂದ್ರೆ ಜೆಡಿಎಸ್ ಗೆ ತಿರುಗೇಟು ನೀಡಿದಂತಾಗುತ್ತದೆ. ಹಾಗಾಗಿ ಸಿದ್ದರಾಮಯ್ಯ ಇನ್ನೊಂದು ಸುತ್ತಿನ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.