– 2018ರಲ್ಲೇ ಸಿಎಂ ಆಗಿ ಶಂಕುಸ್ಥಾಪನೆ ನೆರವೇರಿಸಿದ್ದ ಸಿದ್ದರಾಮಯ್ಯ
– 2023ರ ಅಂತ್ಯದಲ್ಲಿ ಯೋಜನೆಗೆ ಚಾಲನೆ
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿ ಬಳಿ ತುಂಗಭದ್ರಾನದಿ ಮೂಲಕ 24 ಗ್ರಾಮಗಳ ಸುಮಾರು 40 ಸಾವಿರ ಎಕರೆ ಜಮೀನಿಗೆ ನೀರುಣಿಸುವ ತಿಮ್ಮಾಪುರ ಏತನೀರಾವರಿ ಯೋಜನೆಯನ್ನು (Lift Irrigation Project) ಸಿಂಧನೂರಿನಲ್ಲಿ ಶನಿವಾರ (ಇಂದು) ಸಿಎಂ ಸಿದ್ದರಾಮಯ್ಯ (Siddaramaiah) ಉದ್ಘಾಟಿಸಿದರು.
ಜಿಲ್ಲೆಯ ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದ ಜಮೀನುಗಳ ರೈತರು (Farmers) ನದಿ ಹತ್ತಿರದಲ್ಲಿದ್ದರೂ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ 2018 ಫೆಬ್ರವರಿ 18ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. 2019 ರಲ್ಲಿ ಕಾಮಗಾರಿಯನ್ನ ಗುತ್ತಿಗೆ ನೀಡಲಾಗಿತ್ತು. ತುಂಗಭದ್ರಾ ನದಿಯಿಂದ 160 ಎಚ್.ಪಿ ಸಾಮರ್ಥ್ಯದ 4 ಮೋಟರ್ಗಳನ್ನ ಅಳವಡಿಸಿ ನೀರೆತ್ತುವ ಯೋಜನೆಯನ್ನ 90 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಇದನ್ನೂ ಓದಿ: ನಂದಗೊಂಡನಹಳ್ಳಿಯ 12 ಎಕರೆಯಲ್ಲಿ ಬೆಳೆದಿದ್ದ ಮರಗಳ ನಾಶ – ಐವರು ಅರಣ್ಯಾಧಿಕಾರಿಗಳ ಅಮಾನತು
ನದಿಯಿಂದ 17.10 ಕಿಮೀ ಅಂತರದಲ್ಲಿರುವ ತುರಕಟ್ಟಿ ಗ್ರಾಮದ ಹತ್ತಿರದ ಆರ್.ಎನ್ ನಗರದ ಬಳಿಯ ತುಂಗಭದ್ರಾ ಎಡದಂಡೆ ನಾಲೆಯ ವಿತರಣಾ ಕಾಲುವೆ ನೀರು ಹಾಯಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ. ನಂತರ ಕೆಳಭಾಗದ ಕಾಲುವೆ ಮತ್ತು ಅಕ್ಕಪಕ್ಕದ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಯಿಂದ ಕಾಲುವೆಯ ಕೆಳಭಾಗದ 40 ಸಾವಿರ ಎಕರೆ ಪ್ರದೇಶಕ್ಕೆ ಅನುಕೂಲವಾಗಲಿದೆ. ಇದನ್ನೂ ಓದಿ: ಹಣ ಡಬಲ್ ಮಾಡೋದಾಗಿ ಸತೀಶ್ ಜಾರಕಿಹೊಳಿ ಆಪ್ತನಿಗೆ 25 ಲಕ್ಷ ರೂ. ವಂಚಿಸಿದ್ದ ಗ್ಯಾಂಗ್ ಅರೆಸ್ಟ್
ತುಂಗಭದ್ರಾ ಎಡದಂಡೆ ಉಪಕಾಲುವೆಯ ನೀರು ಸಮರ್ಪಕವಾಗಿ ಜಮೀನುಗಳಿಗೆ ಹರಿಯದ ಕಾರಣ ತೊಂದರೆ ಅನುಭವಿಸುತ್ತಿದ್ದ ತಾಲೂಕಿನ 24ಕ್ಕೂ ಹೆಚ್ಚು ಗ್ರಾಮಗಳ ರೈತರ ಎರಡು ದಶಕಗಳ ಕನಸು ಈಗ ನನಸಾಗುತ್ತಿದೆ. ವಾರ್ಷಿಕ ಮಳೆ ಪ್ರಮಾಣ ಕುಸಿತ, ತುಂಗಭದ್ರಾ ಅಣೆಕಟ್ಟೆಯಿಂದ ನೀರಿನ ಅಲಭ್ಯತೆಯಿಂದಾಗಿ ಈ ಭಾಗದ ರೈತರ ಜಮೀನುಗಳಿಗೆ ನೀರಿನ ಕೊರತೆಯಾಗಿತ್ತು. ಇದರಿಂದ ಪ್ರತಿವರ್ಷ ರೈತರು ಬೆಳೆನಷ್ಟ ಅನುಭವಿಸುತ್ತಿದ್ದರು. ತುಂಗಭದ್ರಾ ನದಿ ಪಕ್ಕದಲ್ಲಿದ್ದರೂ ಭತ್ತ ಸೇರಿ ತೋಟಗಾರಿಕೆ ಬೆಳೆ ಬೆಳೆಯಲು ಆಗದೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದ ರೈತರು ಸರ್ಕಾರಕ್ಕೆ ಏತ ನೀರಾವರಿ ಯೋಜನೆಗೆ ಬೇಡಿಕೆಯಿಟ್ಟಿದ್ದರು. ಅಂದಿನ ಶಾಸಕ ಹಂಪನಗೌಡ ಬಾದರ್ಲಿ ಈ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು. ಈ ಹಿಂದೆ 2018 ರಲ್ಲಿ ಸಿಎಂ ಆಗಿದ್ದಾಗ ಈ ಯೋಜನೆಗೆ ಚಾಲನೆ ನೀಡಿದ್ದ ಸಿದ್ದರಾಮಯ್ಯ ಅವರೇ ಲೋಕಾರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ.