ಮಂಡ್ಯ: ನನ್ನ ಅವನು 420 ಎಂದು ಕರೆದರೆ ಅವನನ್ನು ಮದ್ದೂರು ತಾಲೂಕಿನಲ್ಲಿ 840 ಮತ್ತು ಟೋಕನ್ ಗಿರಾಕಿ ಎಂದು ಕರೆಯುತ್ತಾರೆ ಎಂದು ಜಿ.ಮಾದೇಗೌಡ ಪುತ್ರ ಮಧುಮಾದೇಗೌಡ ವಿರುದ್ಧ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಾಗ್ದಾಳಿ ನಡೆಸಿದರು.
ಭಾನುವಾರ ಎಲ್.ಆರ್. ಶಿವರಾಮೇಗೌಡ ಜೆಡಿಎಸ್ ಕಾರ್ಯಕರ್ತೆಯೊಂದಿಗೆ ಮಾತನಾಡುವ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಜಿ.ಮಾದೇಗೌಡ ವಿರುದ್ಧ ಶಿವರಾಮೇಗೌಡ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಧುಮಾದೇಗೌಡ ಶಿವರಾಮೇಗೌಡರನ್ನು 420 ಹಾಗೂ ಜೋಕರ್ ಎಂದು ಕರೆಯುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಆ ಹೇಳಿಕೆಗೆ ತಿರುಗೇಟು ಕೊಟ್ಟ ಶಿವರಾಮೇಗೌಡ, ಮಧುಮಾದೇಗೌಡರನ್ನು ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ 840 ಮತ್ತು ಟೋಕನ್ ಗಿರಾಕಿ ಎಂದು ಕರೆಯುತ್ತಾರೆ ಎಂದು ಟೀಕಿಸಿದರು.
ನಾನು ಮಾದೇಗೌಡರ ವಿರುದ್ಧ ಅವಹೇಳನವಾಗಿ ಏನು ಹೇಳಿಲ್ಲ, ಈ ಹಿಂದೆ ನನಗೆ ಮಾದೇಗೌಡರ ನಡುವೆ ನಡೆದ ಹೋರಾಟ ಘಟನಾವಳಿಯನ್ನು ಹೇಳಿದ್ದೇನೆ ಅಷ್ಟೇ. ಮಾದೇಗೌಡರ ಬಗ್ಗೆ ನನಗೆ ಗೌರವವಿದೆ. ಅದರ ಬಗ್ಗೆ ಯಾವುದೆ ಸಂದೇಹ ಬೇಡ. ನಾನು ಹೋರಾಟದಲ್ಲಿ ಮಾದೇಗೌಡರಿಗೆ ಹೆದರಿಕೊಂಡು ನಮ್ಮೂರಲ್ಲಿ ಕೂತಿಲ್ಲ, ಮಾದೇಗೌಡರ ವಿರುದ್ಧ ಗೆದ್ದು ಹೋರಾಟ ಮಾಡಿದ್ದೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಶಿವರಾಮೇಗೌಡ ಸರ್ಕಸ್ನಲ್ಲಿನ ಜೋಕರ್: ಮಧು ಮಾದೇಗೌಡ
ನನ್ನ ಜೀವನದಲ್ಲಿ ಚುನಾವಣೆಗಳನ್ನು ಎದುರಿಸಿದ್ದೇನೆ. ಇದರಲ್ಲಿ ಅರ್ಧ ಚುನಾವಣೆಗಳನ್ನು ಗೆದ್ದಿದ್ದೇನೆ. ಮಧುಮಾದೇಗೌಡರ ರೀತಿ ದೊಡ್ಡ ವ್ಯಕ್ತಿತ್ವ ಇದ್ದವರ ಮಗ ನಾನಲ್ಲ, ಮಧುಮಾದೇಗೌಡ ಹೀಗಿದ್ದರೂ ಮದ್ದೂರು ತಾಲೂಕಿನಲ್ಲಿ ಮೇಲಕ್ಕೆ ಎದ್ದಿಲ್ಲ ಎಂದರು.
ನನ್ನ 420 ಅಂತೀರಲ್ಲಾ 420 ಕೆಲಸ ಮಾಡಿದ್ದರೆ ದಾಖಲೆ ಸಹಿತ ಬನ್ನಿ, ನನ್ನ ವಿರುದ್ಧ ಆರೋಪ ಸುಳ್ಳಾದರೇ ನಿಮ್ಮನ್ನ 840 ಎನ್ನುತ್ತಾರೆ. ನನ್ನ ಸರ್ಕಸ್ನಲ್ಲಿ ಇರೋ ಜೋಕರ್ ಅಂದಿದ್ದೀರಾ, ಮಧುಮಾದೇಗೌಡರೇ ನಿಮ್ಮನ್ನು ಮದ್ದೂರು ತಾಲೂಕಿನಲ್ಲಿ ಟೋಕನ್ ಗಿರಾಕಿ ಎನ್ನುತ್ತಾರೆ. ಅವರ ಅಪ್ಪನ ಹೆಸರಿನಲ್ಲಿ ಟಿಕೆಟ್ ತಗೋತಾರೆ ಟೋಕನ್ ಹಾಕೋತಾರೆ ಎಂದು ಜನ ಹೇಳುತ್ತಾರೆ. ಎಂಎಲ್ಸಿ ಚುನಾವಣೆ ಒಂದರಲ್ಲಿ ನಾಮಿನೇಷನ್ ಆಗಿರೋದು ಬಿಟ್ಟರೇ ಎಲ್ಲೂ ಹೊರಗಡೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ನನ್ನ ಹೆಸರು ಶಿವರಾಮೇಗೌಡ ಅಷ್ಟೇ, ನೀವು ನಿಮ್ಮ ಅಪ್ಪನ ಹೆಸರು ಇಟ್ಟುಕೊಂಡಿದ್ದೀರಾ. ಹೀಗಿರುವಾಗ ನೀವು 4 ಬಾರಿ ಎಂಎಲ್ಎ ಆಗಬೇಕಿತ್ತು. ಆದರೆ ನೀವು ಮೇಲಕ್ಕೆ ಎದ್ದಿಲ್ಲ. ನಾಲಿಗೆ ಹರಿಬಿಡಬೇಡಿ, ಈ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಫುಟ್ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ
ರಾಜಕಾರಣದಲ್ಲಿ ಇದೆಲ್ಲ ಬರುತ್ತದೇ ಇಲ್ಲಿಗೆ ನಿಲ್ಲಿಸೋಣಾ. ಇದನ್ನು ಬೆಳಸಬೇಕು ಅಂದರೆ ನಾನು ಅಡ್ಡಿ ಇಲ್ಲ, ಎಲ್ಲಾದಕ್ಕೂ ರೆಡಿ ಇದ್ದೇನೆ. 1999ರಲ್ಲಿ ಕಾಂಗ್ರೆಸ್ನಲ್ಲಿ ನಿಲ್ಲೋಕೆ ನಿಮ್ಮಪ್ಪ ಅವಕಾಶ ಕೊಟ್ಟಿದ್ದರೆ ಇಷ್ಟೊತ್ತಿಗೆ ಎರಡು ಬಾರಿ ಮಂತ್ರಿ ಆಗುತ್ತಿದ್ದೆ. ನನ್ನ ತೆಗೆದವನು ನಿಮ್ಮಪ್ಪ, ಇತಿಹಾಸ ಬೇಡಾ, ಸತ್ತವರ ಬಗ್ಗೆ ಇಷ್ಟೊಂದು ಮಾತನಾಡದುವುದು ಸರಿಯಲ್ಲ.ನಾನು ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸುತ್ತೇನೆ, ನಾನಗೆ ಮಾದೇಗೌಡರ ಬಗ್ಗೆ ಈಗಲೂ ಗೌರವ ಇಟ್ಟುಕೊಂಡಿದ್ದೇನೆ. ಆದರೆ ಹಳೆಯ ಸಂದರ್ಭವನ್ನು ಹೇಳಿದೆ ಅಷ್ಟೆ ಎಂದು ಹೇಳಿದರು. ಇದನ್ನೂ ಓದಿ: ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್ ಹಾಕ್ತೀನಿ ಎಂದ ಚನ್ನಣ್ಣನವರ್