ರಾಯ್ಪುರ: ಛತ್ತೀಸ್ಗಢದಲ್ಲಿ ನಕ್ಸಲರ ಅಟ್ಟಹಾಸ ಹೆಚ್ಚುತ್ತಿದ್ದು, ಬಸ್ತಾರ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿಯನ್ನು ಹತ್ಯೆಗೈದಿದ್ದಾರೆ.
ಜುಲೈ 26ರಂದು 40-50 ಮಂದಿ ಮಾವೋವಾದಿಗಳು ತಿರಿಯಾ ಗ್ರಾಮದ ಅರಣ್ಯದಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಈ ಮಾಹಿತಿ ಮೇರೆಗೆ ಪೊಲೀಸರು, ಜಿಲ್ಲಾ ಭದ್ರತಾ ಸಿಬ್ಬಂದಿ, ವಿಶೇಷ ಮೀಸಲು ಪಡೆ ಜೊತೆ ಸೇರಿ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಒಡಿಶಾ ಗಡಿಯಲ್ಲಿನ ತಿರಿಯಾ ಗ್ರಾಮದ ಅರಣ್ಯದ ಬಳಿ ಗುಂಡಿನ ಘರ್ಷಣೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿ ಮೇಲೆ ಮೂವರು ಮಹಿಳಾ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು.
ಈ ವೇಳೆ ಪ್ರತಿದಾಳಿ ನಡೆಸಿ ಒಟ್ಟು ಏಳು ಮಂದಿ ನಕ್ಸಲರನ್ನು ಹತ್ಯೆಗೈಯಲಾಯಿತು. ಕೆಲವು ನಕ್ಸಲರು ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ವಿಭಾಗದ ಡಿಎಸ್ಪಿ ಸುಂದರ್ ರಾಜ್ ಹೇಳಿದ್ದಾರೆ.
ಈ ವೇಳೆ ಯಾವ ಸಿಬ್ಬಂದಿಯು ಕೂಡ ಗಾಯಗೊಂಡಿಲ್ಲ ಎನ್ನಲಾಗಿದೆ. ಅಲ್ಲದೆ ನಕ್ಸಲರ ಮೃತದೇಹಗಳನ್ನು ಗುರುತಿಸಲು ಜಗ್ದಲ್ಪುರಕ್ಕೆ ರವಾನಿಸಲಾಗಿದೆ. ಹಾಗೆಯೇ ಘಟನಾ ಸ್ಥಳದಲ್ಲಿ ಐಎನ್ಎಸ್ಎಎಸ್ ರೈಫಲ್, 4 303 ರೈಫಲ್ಗಳು, ಇತರೇ ಮಾರಾಕಾಸ್ತ್ರಗಳನ್ನು ಸಿಬ್ಬಂದಿ ವಶಪಡಿಕೊಂಡಿದ್ದಾರೆ.
ತಿರಿಯಾ ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲ ಗ್ರಾಮವನ್ನು ತಮ್ಮ ವಶಕ್ಕೆ ಪಡೆಯಲು ಕೆಲವು ದಿನಗಳ ಹಿಂದೆಯಷ್ಟೇ ನಕ್ಸಲರ ತಂಡ ಈ ಅರಣ್ಯಕ್ಕೆ ಬಂದು ನೆಲೆಸಿತ್ತು. ಅಲ್ಲದೆ ಅವರ ಕಾವಲಿಗಾಗಿ ಜನರನ್ನು ಕೂಡ ಅವರು ಹೊಂದಿದ್ದರು. ಕಾವಲಿಗಿದ್ದ ವ್ಯಕ್ತಿಗಳು ಗ್ರಾಮಗಳಲ್ಲಿ ನಕ್ಸಲರ ಬಗ್ಗೆ ಜನರಲ್ಲಿ ಭಯಹುಟ್ಟಿಸುತ್ತಿದ್ದರು. ಅಲ್ಲದೆ ವಾರದ ಸಂಸ್ಥೆಗಳಿಗೂ ಕೂಡ ತೆರೆಳುತ್ತಿದ್ದರು. ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಕಾವಲುಗಾರರು ನಕ್ಸಲರಿಗೆ ತಿಳಿಸಿದ್ದು, ಅವರು ಅರಣ್ಯದಿಂದ ಪರಾರಿಯಾಗಲೂ ಹೊರಟಿದ್ದರು. ಆದರೆ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಜಾಗೃತರಾಗಿದ್ದರಿಂದ ನಕ್ಸಲರನ್ನು ಸದೆಬಡಿಯಲು ಸಹಕಾರಿಯಾಯ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.