ಬೆಂಗಳೂರು: ನಾನು ಮತ್ತೆ ಕಾಂಗ್ರೆಸ್ ಸೇರ್ಪಡೆ ಆಗಿದ್ದು ಹೆಚ್ಚು ಸುದ್ದಿ ಆಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಸೇರ್ಪಡೆ ಆಗಿದ್ದು ಪಕ್ಷದ ಕಾರ್ಯಕರ್ತರಿಗೂ ಗೊತ್ತಾಗಿಲ್ಲ ಅನ್ಸತ್ತೆ. ಹಲವರು ಇವತ್ತು ಗಾಬರಿಯಾದರು ಎಂದು ನಟಿ ಭಾವನಾ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಮಾಚಾರಿ ಧಾರಾವಾಹಿ, ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೆ. ಶಾಸ್ತ್ರೀಯ ಸಂಗೀತದಲ್ಲೂ ಬ್ಯುಸಿ ಇದ್ದೆ. ಹೀಗಾಗಿ ಕಾವೇರಿ ಪಾದಯಾತ್ರೆಗೂ ಬರಕ್ಕಾಗಿಲ್ಲ. ಇವತ್ತು ಈ ಪ್ರತಿಭಟನೆಯಲ್ಲಿ ನಾನು ಬರಲೇಬೇಕಿತ್ತು ಎಂದರು. ಇದನ್ನೂ ಓದಿ: ಹೌದು ನಾವು ಗಾಂಧಿ ಕುಟುಂಬದ ಗುಲಾಮರು, ಬಿಜೆಪಿಯವ್ರು ಸತ್ಯವನ್ನೇ ಹೇಳಿದ್ದಾರೆ: ಡಿಕೆಶಿ
ಕಾರ್ಯಕರ್ತರೊಬ್ಬರು ನನ್ನನ್ನು ಇವತ್ತು ತಡೆದಾಗ ಬೇರೆ ನಾಯಕರು ಬೆಂಬಲಕ್ಕೆ ಬರುವ ಅಗತ್ಯ ಇರಲಿಲ್ಲ. ನಾವೇ ಸ್ವತಂತ್ರವಾಗಿ, ವೈಯಕ್ತಿಕವಾಗಿ ಎಲ್ಲವನ್ನೂ ಎದುರಿಸಬೇಕು. ಜೊತೆಗೆ ಇವತ್ತು ಅಂತಹ ಗಂಭೀರ ಘಟನೆ ಏನೂ ನಡೆಯಲಿಲ್ಲ. ನಾನು ಬಿಜೆಪಿಗೆ ಹೋಗಿದ್ದು ನನ್ನ ಬಾಲಿಷ ನಿರ್ಧಾರ. ನಾನು ಬಿಜೆಪಿಗೆ ಹೋಗಬಾರದಿತ್ತು. ನನ್ನ ತತ್ವ ಸಿದ್ಧಾಂತಗಳಿಗೆ ಬಿಜೆಪಿ ಒಗ್ಗಲ್ಲ. ಬಿಜೆಪಿಗೆ ಹೋಗಿದ್ದು ನನ್ನದೇ ನಿರ್ಧಾರ ಆಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆಗೆ ಬಂದ ನಟಿ ಭಾವನಾಗೆ ಹಿಗ್ಗಾಮುಗ್ಗ ತರಾಟೆ!
ಕಾಂಗ್ರೆಸ್ ನಲ್ಲಿ ಸಿಎಂ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಡಿಕೆಶಿ ಪಕ್ಷದ ಹಿರಿಯ ನಾಯಕರು, ಅಗಾಧ ಅನುಭವ ಇರೋರು. ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ರೀತಿಯಲ್ಲಿ ಪರಿಸ್ಥಿತಿ ಇಲ್ಲದಿರಬಹುದು. ರಾಜಕೀಯದಲ್ಲಿ ಎಲ್ಲರೂ ಸಿಎಂ ಆಗಲು ಬಯಸುತ್ತಾರೆ, ಇದು ಸಹಜ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸರ್ಕಾರ ನಡೆಸಬೇಕು. ಯಾರು ಸಿಎಂ ಆಗ್ತಾರೆ ಅಂತ ಜನ ನಿರ್ಧಾರ ತಗೋತಾರೆ. ಇದೇ ವೇಳೆ ಈ ಸಲ ಟಿಕೆಟ್ ಕೇಳ್ತೀರಾ ಎಂಬ ಪ್ರಶ್ನೆಗೆ, ಅದರ ಬಗ್ಗೆ ಪಕ್ಷಕ್ಕೆ ಬಿಡುತ್ತೇನೆ ಎಂದು ಭಾವನಾ ತಿಳಿಸಿದರು.