ಬಾಲಿವುಡ್ (Bollywood) ನ ಖ್ಯಾತ ನಟ ಸಲ್ಮಾನ್ ಖಾನ್ ಗೆ ಗ್ಯಾಂಗ್ ಸ್ಟರ್ ಗಳು ಪದೇ ಪದೇ ಜೀವ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತಷ್ಟು ಭದ್ರತೆಯನ್ನು ಒದಗಿಸಲಾಗಿದೆ. ಅಲ್ಲದೇ, ಅವರು ಬಳಸುವ ಕಾರನ್ನು ಸಹ ಬದಲಾಯಿಸಲಾಗಿದೆ. ಅತ್ಯಂತ ಸುರಕ್ಷಿತ ಹಾಗೂ ಗುಂಡು ನಿರೋಧಕ ದುಬಾರಿ ಕಾರನ್ನೇ ಸಲ್ಮಾನ್ ಖಾನ್ ಖರೀದಿಸಿದ್ದಾರೆ. ಈಗಾಗಲೇ ಬಹಿರಂಗ ಸಭೆ, ಸಿನಿಮಾ ಪ್ರಚಾರ ಮತ್ತು ಜನಸಂದಣಿ ಇರುವಂತಹ ಸ್ಥಳಗಳಲ್ಲಿ ಕಾಣಿಸಿಕೊಳ್ಳದಂತೆ ಭದ್ರತಾ (Security) ಸಿಬ್ಬಂದಿಗಳು ಎಚ್ಚರಿಸಿದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಶೂಟಿಂಗ್ ಸ್ಥಳದಲ್ಲಿ ಸಲ್ಮಾನ್ ಖಾನ್ ಅವರನ್ನು ಅವರ ಆಪ್ತರು ಕೂಡ ಸಮೀಪಕ್ಕೆ ಬಾರದಂತೆ ಭದ್ರತೆ ಒದಗಿಸಲಾಗಿದೆ.
ಸಲ್ಮಾನ್ ಖಾನ್ ಅವರ ಖಾಸಗಿ ಭದ್ರತೆಯನ್ನು ಅವರ ಆಪ್ತರೇ ಆಗಿರುವ ಶೇರಾ (Shera) ನೋಡಿಕೊಳ್ಳುತ್ತಾರೆ. ಸಲ್ಮಾನ್ ಖಾನ್ ಅವರ ಸಮೀಪ ಶೇರಾ ನೋಡಿಕೊಳ್ಳುವ ಭದ್ರತಾ ಸಿಬ್ಬಂದಿ ಇದ್ದರೆ, ನಂತರ ಸುತ್ತಿನಲ್ಲಿ ಮುಂಬೈ ಪೊಲೀಸರು ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ ಇರುತ್ತಾರೆ. ಹಾಗಾಗಿ ಸಲ್ಮಾನ್ ಖಾನ್ ಬಳಿ ನಟರು ಬಂದರೂ, ಭೇಟಿ ಆಗದಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ಕೆಲ ವಾರಗಳ ಹಿಂದೆಯಷ್ಟೇ ಬಾಲಿವುಟ್ ನಟ ವಿಕ್ಕಿ ಕೌಶಲ್ ಅವರನ್ನು ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ ತಳ್ಳಿದರು ಎನ್ನುವ ಕಾರಣಕ್ಕಾಗಿ ದೊಡ್ಡ ಸುದ್ದಿಯಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಇಂಥದ್ದೆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನಟಿ ಹೇಮಾ ಶರ್ಮಾ. ಸಲ್ಮಾನ್ ಖಾನ್ ಭದ್ರತಾ ಸಿಬ್ಬಂದಿ ನನ್ನನ್ನು ನಾಯಿಯನ್ನು ಎಳೆದು ಹೊರ ಹಾಕಿದಂತೆ ಹೊರಹಾಕಿದರು ಎಂದು ಅಳಲು ತೋಡಿಕೊಂಡಿದ್ದಾರೆ. ಈ ಪ್ರಮಾಣದಲ್ಲಿ ಸಲ್ಮಾನ್ ಗೆ ಭದ್ರತೆ ಒದಗಿಸಲಾಗಿದೆ.
- Advertisement
- Advertisement
ಇಷ್ಟೊಂದು ಭಾರೀ ಭದ್ರತೆಯನ್ನು ನೀಡಲು ಕಾರಣವೂ ಇದೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಹೇಳಿಕೆ ನೀಡಿದ್ದಾನೆ. ಅವನ ತಂಡ ಅನೇಕ ಸದಸ್ಯರು ಪೊಲೀಸರ ಕೈಗೆ ಸಿಕ್ಕಿಬಿದ್ದಾಗಲೂ ಸಲ್ಮಾನ್ ಕೊಲ್ಲುವ ಮಾತುಗಳನ್ನು ಆಡಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಅವರಿಗೆ ವಿಶೇಷ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಕೇವಲ ಸಲ್ಮಾನ್ ಗೆ ಮಾತ್ರವಲ್ಲ, ಅವರ ತಂದೆ ಮತ್ತು ಕುಟುಂಬಕ್ಕೆ ಭದ್ರತೆ ನೀಡಲಾಗಿದೆ. ಲಾರೆನ್ಸ್ ತಣ್ಣಗಾದ ಎನ್ನುವ ಹೊತ್ತಿಗೆ ಇದೀಗ ಮತ್ತೊಬ್ಬ ಗ್ಯಾಂಗ್ ಸ್ಟಾರ್ ಸಲ್ಮಾನ್ ಕೊಲ್ಲುವ ಕುರಿತು ಮಾತನಾಡಿದ್ದಾನೆ.
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದಿರುವುದು ತಾನೇ ಎಂದು ಹೇಳಿಕೊಂಡಿರುವ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ (Goldie Brar) ನನ್ನ ಮುಂದಿನ ಟಾರ್ಗೆಟ್ ಸಲ್ಮಾನ್ ಖಾನ್ ಎಂದು ಹೇಳುವ ಮೂಲಕ ಆತಂಕ ಸೃಷ್ಟಿ ಮಾಡಿದ್ದಾನೆ. ರಾಷ್ಟ್ರೀಯ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಗೋಲ್ಡಿ ಬ್ರಾರ್, ‘ನನ್ನ ಮುಂದಿನ ಗುರಿ ಇರುವುದು ಸಲ್ಮಾನ್ ಖಾನ್ ನನ್ನು ಕೊಲ್ಲುವುದು. ಕೊಂದೇ ಕೊಲ್ಲುತ್ತೇನೆ. ನನ್ನಿಂದ ಅವನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಸಂದರ್ಶನದಲ್ಲಿ ಹೇಳಿದ್ದಾನೆ.
ರಾಷ್ಟ್ರೀಯ ವಾಹಿನಿಯಲ್ಲಿ ಹಲವು ರಾಜ್ಯಗಳ ಪೊಲೀಸರಿಗೆ ಬೇಕಾಗಿರುವ, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗೋಲ್ಡಿ ಬ್ರಾರ್ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಬಹಿರಂಗವಾಗಿ ಈ ರೀತಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹವೂ ಹೆಚ್ಚಾಗಿದೆ. ಈಗಾಗಲೇ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್ ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾರೆ. ಜೈಲಿನಿಂದಲೇ ಸಲ್ಮಾನ್ ಬಗ್ಗೆ ಕೊಲ್ಲುವ ಮಾತುಗಳನ್ನು ಆಡಿದ್ದಾನೆ.
ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ.