ನವದೆಹಲಿ: ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತಲುಪಲು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಜ್ಯವಾರು ಕೇಂದ್ರಗಳನ್ನು ರಚಿಸಲಾಗಿದೆ ಎಂದು ಕೇಂದ್ರ ಸಚಿವ ಜೀತೆಂದ್ರ ಸಿಂಗ್ ತಿಳಿಸಿದರು.
ಇಂದು ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಪ್ರತಿ ರಾಜ್ಯಕ್ಕೂ ಸಹಾಯ ಕೇಂದ್ರಗಳನ್ನು ರಚಿಸಿದ್ದೇವೆ. ವಿದ್ಯಾರ್ಥಿಗಳು ಆಯಾ ಸಹಾಯ ಕೇಂದ್ರಗಳನ್ನು ಸಂಪರ್ಕಿಸುತ್ತಿದ್ದಾರೆ. ಅವರಿಗೆ ಉಪಾಹಾರವನ್ನು ನೀಡಲಾಗುತ್ತಿದೆ. ಜೊತೆಗೆ ವೋಲ್ವೋ ಬಸ್ಗಳ ವ್ಯವಸ್ಥೆಯನ್ನು ಮಾಡಿದ್ದೇವೆ. ಇದರಿಂದ ಇತರ ರಾಜ್ಯಗಳಿಗೆ ತೆರಳುವ ವಿದ್ಯಾರ್ಥಿಗಳು ರಸ್ತೆಯ ಮೂಲಕ ಆಯಾ ಸ್ಥಳಗಳಿಗೆ ಪ್ರಯಾಣಿಸಬಹುದು. ರೈಲಿನಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಅತಿಥಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೆಲವು ವಿದ್ಯಾರ್ಥಿಗಳು ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಅವರಲ್ಲಿ ಮೂವರು ಶ್ರೀನಗರಕ್ಕೆ ತೆರಳುತ್ತಿದ್ದಾರೆ. ಎಲ್ಲಾ ಸಚಿವರು ಸ್ಥಳಾಂತರಿಸಿದ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಉಕ್ರೇನ್ನಲ್ಲಿ ಇನ್ನೂ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ನಾವು ವ್ಯವಸ್ಥೆ ಮಾಡುತ್ತಿದ್ದೇವೆ ಎಂದ ಅವರು ಇಸ್ತಾನ್ಬುಲ್ನಿಂದ ಸುಮಾರು 220 ವಿದ್ಯಾರ್ಥಿಗಳು ಆಗಮಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ
ಈಗಾಗಲೇ ಉಕ್ರೇನ್ ನೆರೆಯ ನಾಲ್ಕು ದೇಶಗಳಿಂದ ಮೂರು ದಿನಗಳಲ್ಲಿ ಸುಮಾರು 5000 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ಪ್ಲ್ಯಾನ್ ಮಾಡಲಾಗುತ್ತಿದೆ. ಆಪರೇಷನ್ ಗಂಗಾ ಮಿಷನ್ಗೆ ಸಿ 17 ವಿಮಾನ ಬಳಕೆ ಮಾಡಲಾಗುತ್ತಿದೆ. ಮುಂದಿನ 3-4 ದಿನಗಳಲ್ಲಿ ಬೃಹತ್ ಕಾರ್ಯಚರಣೆ ನಡೆಯಲಿದೆ. ಕಳೆದ ಆರು ದಿನಗಳಲ್ಲಿ ಕೇವಲ ಎರಡು ಸಾವಿರ ವಿದ್ಯಾರ್ಥಿಗಳ ಸ್ಥಳಾಂತರ ಮಾಡಲಾಗಿದ್ದು, ನವೀನ್ ಸಾವಿನ ಬೆನ್ನಲೆ ತುರ್ತು ಕಾರ್ಯಚರಣೆಗೆ ವಿದೇಶಾಂಗ ಇಲಾಖೆ ಇಳಿದಿದೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್