ಕಾನ್ಪುರ: ಉತ್ತರಪ್ರದೇಶದ ಕಾನ್ಪುರದ ಮನೆಯೊಂದರಲ್ಲಿ ಬರೋಬ್ಬರಿ 97 ಕೋಟಿ ರೂ. ಮೌಲ್ಯದ ಹಳೇನೋಟು ಜಪ್ತಿ ಮಾಡಿ 2 ದಿನಗಳು ಕಳೆದಿವೆ. ಆದ್ರೆ ಆರೋಪಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಹೇಗೆ ಪ್ಲ್ಯಾನ್ ಮಾಡಿದ್ದ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ತಲೆಕೆಡಿಸಿಕೊಂಡಿವೆ.
ಬೆಂಗಳೂರು ಮೂಲದ ಹರಿ ಕೃಷ್ಣ ಎಂಬಾತ ತಮಗೆ ನೋಟುಗಳನ್ನ ಅವುಗಳ ಮುಖಬೆಲೆಯ 40% ಗೆ ಬದಲಾಯಿಸಿಕೊಡುವುದಾಗಿ ಹೇಳಿದ್ದ ಎಂದು ಆರೋಪಿಗಳು ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 16 ಜನರನ್ನ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ದೃಢವಾದ ಸಾಕ್ಷಿಗಳನ್ನು ಸಂಗ್ರಹಿಸಿದ ನಂತರ ಅವರನ್ನ ವಶಕ್ಕೆ ಕೊಡಲು ಕೋರ್ಟ್ನಲ್ಲಿ ಕೇಳಲಿದ್ದೇವೆ. ಸದ್ಯ ಆರೋಪಿಗಳನ್ನ ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಅನುರಾಗ್ ಆರ್ಯ ಹೇಳಿದ್ದಾರೆ.
ಪ್ರಕರಣ ಹಲವಾರು ಕಾರಣಗಳಿಂದ ನಿಗೂಢವಾಗಿದೆ ಎಂದು ಆರ್ಯ ಹೇಳಿದ್ದಾರೆ. 16 ಆರೋಪಿಗಳಲ್ಲಿ ಯಾರೊಬ್ಬರೂ ಕೂಡ ತಾವು ಕೊನೆಯದಾಗಿ ಹಳೇ ನೋಟುಗಳನ್ನ ತಲುಪಿಸಬೇಕಿದ್ದ ವ್ಯಕ್ತಿಯ ಹೆಸರನ್ನು ಇದುವರೆಗೂ ಬಾಯ್ಬಿಟ್ಟಿಲ್ಲ. ಮತ್ತೊಂದು ದೊಡ್ಡ ಸಂಸ್ಥೆಯ ಮೂಲಕ ಹಣವನ್ನ ಬದಲಾವಣೆ ಮಾಡಬೇಕಿತ್ತು ಎಂದು ಕೆಲವರು ಹೇಳಿದ್ದಾರೆ. ಆದ್ರೆ ಆ ಸಂಸ್ಥೆಯ ಹೆಸರನ್ನ ಹೇಳಿಲ್ಲ. ಕಾನ್ಪುರದ ಸಸ್ಯಶಾಸ್ತ್ರ ಪ್ರಾಧ್ಯಾಪಕ ಸಂತೋಷ್ ಯಾದವ್ ಎಂಬಾತ ಕಾನ್ಪುರ ಹಾಗೂ ಲಕ್ನೋದಿಂದ ಹಣವನ್ನ ಸಂಗ್ರಹಿಸುತ್ತಿದ್ದ. ಜೊತೆಗೆ ಹಣ ಬದಲಾವಣೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸಂಜೀವ್ ಅಗರ್ವಾಲ್ ಹಾಗೂ ಮನೀಷ್ ಅಗರ್ವಾಲ್ ಕಮಿಷನ್ ಏಜೆಂಟ್ಗಳಾಗಿ ಕೆಲಸ ಮಾಡುತ್ತಿದ್ದರು. ಹಾಗೇ ಹೈದರಾಬದ್ನ ಕೋಟೇಶ್ವರ್ ರಾವ್ ಬೆಂಗಳೂರಿನ ಹರಿಕೃಷ್ಣಗೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಗಳ ಪ್ರಾಥಮಿಕ ಹೇಳಿಕೆಯ ಆಧಾರದ ಮೇಲೆ ನಮ್ಮ ತನಿಖೆ ಈಗ ಹರಿಕೃಷ್ಣ ಮೇಲೆ ಕೇಂದ್ರೀಕೃತವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇವರ ಜಾಲ 5 ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದೆಹಲಿ ಹಾಗೂ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಹಳೇ ನೋಟುಗಳನ್ನ ತರಲು ಏಜೆಂಟ್ಗಳು ಕಾನ್ಪುರ- ವಾರಣಾಸಿ-ಕೋಲ್ಕತ್ತ- ಹೈದರಾಬಾದ್ ಮಾರ್ಗ, ಕಾನ್ಪುರ- ವಾರಣಾಸಿ- ಹೈದರಾಬಾದ್ ಮಾರ್ಗ ಹಾಗೂ ಕಾನ್ಪುರ- ಪಶ್ಚಿಮ ಉತ್ತರಪ್ರದೇಶ- ದೆಹಲಿ ಮಾರ್ಗವನ್ನು ಬಳಸುತ್ತಿದ್ದರು. ಆನಂದ್ ಖತ್ರಿ ಅವರಿಗೆ 15 ಕೋಟಿ ರೂ. ಹಣವನ್ನು ಬದಲಾಯಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿರುವುದಾಗಿ ವರದಿಯಾಗಿದೆ.
#WATCH Police seized demonetized currency worth crores from a residential premises in Kanpur. pic.twitter.com/Hh7sLrWwoG
— ANI UP/Uttarakhand (@ANINewsUP) January 17, 2018