ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಜೊತೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ರಾಜಕಾರಣದ ಪಡಸಾಲೆಯಲ್ಲಿ ಕಾಣಿಸಿಕೊಂಡಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಈ ಬಾರಿಯ ಚುನಾವಣೆಯಲ್ಲಿ ರಿಷಬ್ ಶೆಟ್ಟಿ (Rishabh Shetty) ಸಕ್ರಿಯರಾಗಿರುತ್ತಾರೆ ಎನ್ನುವ ಮಾತು ಹಲವು ತಿಂಗಳಿಂದ ಕೇಳಿ ಬರುತ್ತಲೇ ಇದೆ. ಅದಕ್ಕೆ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೆ, ಸಿಎಂ ಜೊತೆ ಕಾಣಿಸಿಕೊಳ್ಳುವ ಮೂಲಕ ರಿಷಬ್ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದ್ದಾರೆ.
ಬಸವರಾಜ ಬೊಮ್ಮಾಯಿ ದಂಪತಿ ಇಂದು ಕೊಲ್ಲೂರು (Kollur) ಮೂಕಾಂಬಿಕಾ (Mukambika) ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅದೇ ದೇವಸ್ಥಾನದಲ್ಲೇ ನಟ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮತ್ತೊಬ್ಬ ಸ್ಟಾರ್ ಪ್ರಚಾರಕ ಬಿಜೆಪಿಗೆ ಬರಲಿದ್ದಾರೆ ಎನ್ನುವ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಇದನ್ನೂ ಓದಿ:ಮನೆಮುಂದೆಯೇ ಶವವಾಗಿ ಪತ್ತೆಯಾದ ಖ್ಯಾತ ಕೊರಿಯನ್ ನಟಿ
ಈಗಾಗಲೇ ಬಸವರಾಜ ಬೊಮ್ಮಾಯಿ ಅವರ ಆಡಳಿತವನ್ನು ಮೆಚ್ಚಿ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ನೇರವಾಗಿ ಬಿಜೆಪಿ (BJP) ಪರವಾಗಿ ಪ್ರಚಾರ ಮಾಡುತ್ತೇನೆ ಎನ್ನುವ ಬದಲು, ಸಿಎಂ ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಸುದೀಪ್ ತಿಳಿಸಿದ್ದಾರೆ. ಇದೀಗ ರಿಷಬ್ ಕೂಡ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ತೇಲಿಬಂದಿದೆ.
ಬಿಜೆಪಿ ಪರವಾಗಿ ರಿಷಬ್ ಅನೇಕ ಬಾರಿ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಬಂದಾಗಲೂ ರಿಷಬ್ ಅವರನ್ನು ಭೇಟಿ ಮಾಡಿದ್ದರು. ಹಾಗಾಗಿ ಉಡುಪಿ, ದಕ್ಷಿಣ ಕನ್ನಡದ 13 ಕ್ಷೇತ್ರಗಳಲ್ಲಿ ರಿಷಬ್ ಬಳಸಲು ಪ್ಲ್ಯಾನ್ ನಡೆದಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಏನೇ ಮಾಹಿತಿ ಕೇಳಿ ಬಂದರೂ, ತಾವು ರಾಜಕಾರಣಕ್ಕೆ ಬರುವುದಿಲ್ಲ ಎಂದು ಈಗಾಗಲೇ ರಿಷಬ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರು ತಮ್ಮ ಮಾತಿಗೆ ಬದ್ಧರಾಗಿ ಇರುತ್ತಾರಾ ಕಾದು ನೋಡಬೇಕು.