ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆ (Pran Pratishtha) ಸಮಾರಂಭದಲ್ಲಿ ದೇಶದ ಬೇರೆ ಬೇರೆ ಭಾಗಗಳ 50ಕ್ಕೂ ಹೆಚ್ಚು ಸಾಂಪ್ರದಾಯಿಕ ವಾದ್ಯಗಳಿಂದ `ಮಂಗಳ ನಾದ’ ಹೊರಹೊಮ್ಮಲಿದೆ. ಖ್ಯಾತ ಕವಿ ಯತೀಂದ್ರ ಮಿಶ್ರಾ ಅವರಿಂದ ಆಯೋಜಿಸಲ್ಪಟ್ಟ ಈ ಭವ್ಯವಾದ ಸಂಗೀತ ಕಾರ್ಯಕ್ರಮಕ್ಕೆ ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಬೆಂಬಲ ನೀಡಿದೆ.
ಸಂಗೀತ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಎರಡು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ವಾದ್ಯಗಳಲ್ಲಿ ಉತ್ತರ ಪ್ರದೇಶದ ಪಖಾವಾಜ್, ಕೊಳಲು ಮತ್ತು ಧೋಲಕ್, ಕರ್ನಾಟಕದ ವೀಣೆ, ಪಂಜಾಬ್ನಿಂದ ಅಲ್ಗೋಜಾ, ಮಹಾರಾಷ್ಟ್ರದಿಂದ ಸುಂದರಿ, ಒಡಿಶಾದಿಂದ ಮರ್ದಲ, ಮಧ್ಯಪ್ರದೇಶದಿಂದ ಸಂತೂರ್, ಮಣಿಪುರದಿಂದ ಪುಂಗ್, ಅಸ್ಸಾಂನಿಂದ ನಾಗದಾ ಮತ್ತು ಕಾಳಿ, ಛತ್ತೀಸ್ಗಢದಿಂದ ತಂಬೂರ, ದೆಹಲಿಯಿಂದ ಶೆಹನಾಯಿ, ರಾಜಸ್ಥಾನದಿಂದ ರಾವಣಹತ, ಪಶ್ಚಿಮ ಬಂಗಾಳದಿಂದ ಶ್ರೀಖೋಲ್ ಮತ್ತು ಸರೋದ್, ಆಂಧ್ರಪ್ರದೇಶದಿಂದ ಘಟಂ, ಜಾರ್ಖಂಡ್ನಿಂದ ಸಿತಾರ್, ಗುಜರಾತ್ನಿಂದ ಸಾಂತರ್, ಬಿಹಾರದಿಂದ ಪಖಾವಾಜ್, ಉತ್ತರಾಖಂಡದಿಂದ ಹುಡ್ಕ ಮತ್ತು ತಮಿಳುನಾಡಿನಿಂದ ನಾಗಸ್ವರಂ, ತವಿಲ್ ಮತ್ತು ಮೃದಂಗಮ್ ಸಹ ಇರಲಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಇದನ್ನೂ ಓದಿ: ಸೋಮವಾರ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ- ಅಯೋಧ್ಯೆಯಲ್ಲಿ ಬಿಗಿ ಭದ್ರತೆ
ಭಕ್ತಿಸಾಗರದಲ್ಲಿ ಮುಳುಗಿರುವ ಅಯೋಧ್ಯೆಯ (Ayodhya) ಶ್ರೀರಾಮನ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಸಂಗೀತ ಕಾರ್ಯಕ್ರಮ ಹೊಸ ಮೆರುಗು ನೀಡಲಿದೆ. ವಿವಿಧ ರಾಜ್ಯಗಳಿಂದ ಸುಮಾರು 50ಕ್ಕೂ ಹೆಚ್ಚು ವಾದ್ಯಗಳು ಈ ಶುಭ ಸಮಾರಂಭದಲ್ಲಿ ಮಂಗಳಕರ ನಾದವನ್ನು ಹೊಮ್ಮಿಸಲಿವೆ. ಇದು ವಿವಿಧ ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿಯನ್ನು ಒಟ್ಟುಗೂಡಿಸಲಿದೆ ಎಂದು ಟ್ರಸ್ಟ್ನ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸೋಮವಾರ ಅದ್ಧೂರಿಯಾಗಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭಕ್ಕೆ ಅಯೋಧ್ಯೆ ಮಾತ್ರವಲ್ಲದೇ ದೇಶದೆಲ್ಲೆಡೆ ಹಬ್ಬದ ಸಡಗರ ಮನೆ ಮಾಡಿದೆ.
ಅಯೋಧ್ಯೆಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅಲ್ಲಿನ ಪ್ರಮುಖ ವೃತ್ತಕ್ಕೆ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರಿಡಲಾಗಿದೆ. ಈ ವೃತ್ತದ ಮಧ್ಯಭಾಗದಲ್ಲಿ 14 ಟನ್ ತೂಕದ ವೀಣೆಯ ಶಿಲ್ಪವನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..