ನವದೆಹಲಿ: ಗುಜರಾತ್ ಮತ್ತು ಮಹಾರಾಷ್ಟ್ರದಿಂದ ರಾಜ್ಯಸಭಾ ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಗುಜರಾತ್ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಮಹಾರಾಷ್ಟ್ರದಿಂದ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಅಶೋಕ್ ಚವಾಣ್ ರಾಜ್ಯಸಭಾ (Rajyasabha Election) ಟಿಕೆಟ್ ಪಡೆದಿದ್ದಾರೆ.
ಪಕ್ಷ ಬಿಡುಗಡೆ ಮಾಡಿರುವ ಹೊಸ ಪಟ್ಟಿಯಲ್ಲಿ ಗುಜರಾತ್ನ ನಾಲ್ವರು ಅಭ್ಯರ್ಥಿಗಳ ಹೆಸರುಗಳಿವೆ. ಜೆಪಿ ನಡ್ಡಾ (JP Nadda) ಅವರಲ್ಲದೆ, ಗುಜರಾತ್ನಿಂದ ಗೋವಿಂದ್ ಭಾಯಿ ಧೋಲಾಕಿಯಾ, ಮಾಯಾಂಕ್ಭಾಯ್ ನಾಯಕ್ ಮತ್ತು ಡಾ. ಜಶ್ವಂತ್ ಸಿಂಗ್ ಸಲಾಂ ಸಿಂಗ್ ಪರ್ಮಾರ್ ಅವರನ್ನು ರಾಜ್ಯಸಭಾ ಅಭ್ಯರ್ಥಿಗಳಾಗಿ ಪಕ್ಷ ಘೋಷಿಸಿದೆ. ಇತ್ತ ಮಹಾರಾಷ್ಟ್ರದಿಂದ ಅಶೋಕ್ ಚವಾಣ್ (Ashok Chavan), ಮೇಧಾ ಕುಲಕರ್ಣಿ ಮತ್ತು ಡಾ. ಅಜಿತ್ ಗೋಪ್ಚಾಡೆ ಅವರಿಗೆ ಪಕ್ಷ ರಾಜ್ಯಸಭಾ ಟಿಕೆಟ್ ನೀಡಿದೆ.
ವಜ್ರದ ಉದ್ಯಮಿಗೆ ಟಿಕೆಟ್: ಗುಜರಾತ್ನ ವಜ್ರದ ವ್ಯಾಪಾರಿ ಗೋವಿಂದಭಾಯ್ ಧೋಲಾಕಿಯಾ ಅವರಿಗೆ ಬಿಜೆಪಿ ರಾಜ್ಯಸಭಾ ಟಿಕೆಟ್ ನೀಡಿರುವುದು ಅಚ್ಚರಿ ಹುಟ್ಟಿಸಿದೆ. ಗೋವಿಂದಭಾಯಿ ಧೋಲಾಕಿಯಾ ಅವರು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದರು. ಇವರು RSSನೊಂದಿಗೆ ಬಹಳ ಹಿಂದಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿದವರಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನವ್ರು ಕೊಟ್ಟ ಕಾರ್ಡ್ ನೀಡಿದ್ರೆ ಮೈತ್ರಿ ಪಕ್ಷದಿಂದ ಗಿಫ್ಟ್
ಫೆ.27 ರಂದು ಮತದಾನ: ನಾಮಪತ್ರ ಸಲ್ಲಿಸಲು ಫೆ.15 ಕೊನೆಯ ದಿನಾಂಕವಾಗಿದ್ದು, ಫೆ. 16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಹೆಸರನ್ನು ಫೆ. 20 ರವರೆಗೆ ಹಿಂಪಡೆಯಲು ಅವಕಾಶ ಇದೆ. ಫೆ.27ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5ರಿಂದ ಮತ ಎಣಿಕೆ ನಡೆಯಲಿದೆ.