ಹೈದ್ರಾಬಾದ್ ಕರ್ನಾಟಕ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಳೆರಾಯ ರಾತ್ರಿ ಸದ್ದು ಮಾಡಿದ್ದಾನೆ. ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಮಳೆಯಾಗಿದೆ. ಗಣಿನಾಡಲ್ಲಿ ಗುಡುಗು-ಸಿಡಿಲಿನೊಂದಿಗೆ 2 ಗಂಟೆ ಮಳೆ ಸುರಿದಿದೆ.
ಮಳೆಯ ಪರಿಣಾಮ ಅನೇಕ ನಗರ ಸೇರಿದಂತೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಾಯಚೂರಿನ ಲಿಂಗಸುಗೂರು, ಸಿಂಧನೂರು, ಮಾನ್ವಿಯಲ್ಲಿ ಮಳೆಯಾಗಿದೆ. ಲಿಂಗಸುಗೂರಿನಲ್ಲಿ ಭಾರೀ ಗಾಳಿಗೆ ಮನೆ ಹಾಗೂ ಅಂಗಡಿಗಳ ಶೆಡ್ಗಳು ಹಾರಿಹೋಗಿವೆ.
ಕೊಪ್ಪಳ, ಯಲಬುರ್ಗಾದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಭಾರಿ ಮಳೆಗೆ ಹರನಾಳ, ಓತಿಹಾಳ ಗ್ರಾಮದಲ್ಲಿ ದ್ರಾಕ್ಷಿ, ಬಾಳೆ, ಲಿಂಬೆ ಬೆಳೆ ನಾಶವಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಸಿಡಿಲು ಬಡಿದು 40 ವರ್ಷದ ಮಲ್ಲಪ್ಪ ಧರೆಪ್ಪ ಹುಣಶ್ಯಾಳ ಅನ್ನೋ ರೈತ ಮೃತಪಟ್ಟಿದ್ದಾರೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಸಿಡಿಲು ಬಡಿದು 25 ವರ್ಷದ ಖಾಜಾಹುಸೇನಿ ಮಾಶಾಳಕರ್ ಅನ್ನೋ ಯುವಕ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಮಳೆಯ ಸಿಂಚನವಾಗಿದೆ.