ಚಿಕ್ಕಬಳ್ಳಾಪುರ: ಮಾರಿ ಕಣ್ಣು ಹೋರಿ ಮ್ಯಾಲೆ, ಮಾಜಿ ಸಿಎಂ ಸಿದ್ದರಾಮಯ್ಯ ಕಣ್ಣು ಅಲ್ಪಸಂಖ್ಯಾತರ ಮೇಲೆ ಎಂದು ಹಿಜಬ್-ಕೇಸರಿ ಶಾಲು ವಿವಾದ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ಮಾಡಿದರು.
ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿರುವ ಹಿಜಬ್ ಹಾಗೂ ಕೇಸರಿ ಶಾಲು ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅಶೋಕ್ ಅವರು, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಹಿಜಬ್ ಹಾಗೂ ಕೇಸರಿ ಶಾಲು ಧರಿಸಿ ಬರುವುದು ತಪ್ಪು. ಸರ್ಕಾರ ಯಾರ ಪರವಾಗಿಯೂ ಇಲ್ಲ. ಸಮವಸ್ತ್ರ ಧರಿಸಿಯೇ ಶಾಲೆಗಳಿಗೆ ಬರಬೇಕು. ನಿಜ ಹೇಳಬೇಕು ಎಂದರೆ ಹಿಜಬ್ ಹಾಗೂ ಕೇಸರಿ ಶಾಲು ಪ್ರಕರಣ ವಿವಾದವೇ ಅಲ್ಲ. ಇದನ್ನು ಕಾಂಗ್ರೆಸ್ ಅವರು ವಿನಃ ಕಾರಣ ವಿವಾದ ಸೃಷ್ಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೂ ಕಾಲಿಟ್ಟ ಹಿಜಬ್, ಕೇಸರಿ ಶಾಲು ಫೈಟ್ – ವಿದ್ಯಾರ್ಥಿಗಳನ್ನ ಹೊರಹಾಕಿದ ಕಾಲೇಜು ಸಿಬ್ಬಂದಿ
ವಿಧಾನಸಭೆ ಚುನಾವಣೆ ಹತ್ತಿರ ಬರ್ತಿರೋದ್ರಿಂದ ಹಿಜಬ್ ವಿವಾದ ಸೃಷ್ಟಿ ಮಾಡ್ತಿದ್ದಾರೆ. ಮಾರಿ ಕಣ್ಣು ಹೋರಿ ಮ್ಯಾಲೆ ಅನ್ನೋ ಹಾಗೆ ಸಿದ್ದರಾಮಯ್ಯ ಅವರ ಕಣ್ಣು ಈಗ ಅಲ್ಪ ಸಂಖ್ಯಾಂತರ ಮೇಲಿದೆ. ಕಾಂಗ್ರೆಸ್ ಸದಾ ಓಲೈಕೆ ರಾಜಕಾರಣ ಮಾಡಿಕೊಂಡು ಬಂದವರು ಎಂದು ಟೀಕಿಸಿದರು.
ಕಾಂಗ್ರೆಸ್ ಅವರು ಈ ದೇಶದಲ್ಲಿ ಕೋಮು ಸಂಘರ್ಷ ಮಾಡುವ ಕೆಲಸ ಬಿಡಲಿ. ಇದು ಭಾರತ ದೇಶ ಇಸ್ಲಾಮಿಕ್ ರಾಜ್ಯ ಅಲ್ಲ. ಭಾರತದ ಸಂಸ್ಕøತಿ ಇತಿಹಾಸದ ಪ್ರಕಾರ ನಡೆದುಕೊಂಡು ಹೋಗಬೇಕು. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತರು, ಬಾದಾಮಿಯಲ್ಲಿ ಈ ಬಾರಿ ಗೆಲ್ಲೋಕೆ ಆಗಲ್ಲ ಎಂದರು. ಚಾಮರಾಜಪೇಟೆ ಮೇಲೆ ಸಿದ್ದರಾಮಯ್ಯ ಅವರು ಕಣ್ಣಿಟ್ಟಿದ್ದಾರೆ. ಹೀಗಾಗಿ ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರೀತಂ ಜೊತೆ ಇಷ್ಟು ವರ್ಷ ಏಕೆ ಕೆಲಸ ಮಾಡಿಲ್ಲ – ಮೌನಮುರಿದ ಸೋನು ನಿಗಮ್
ಆರ್.ಅಶೋಕ್ ಅವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮೊಟ್ಲೂರು ಗ್ರಾಮದಲ್ಲಿ ದಿವಂಗತ ನಾಡೋಜ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರ ಪುತ್ಥಳಿ ಅನಾವರಣ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ರು.