ಗದಗ: ಮೌಢ್ಯ ಪ್ರದರ್ಶಿಸಲು ಹೋಗಿ ಶತಮಾನಗಳಿಂದಲೂ ಜೀವಜಲವಾಗಿದ್ದ ಕೆರೆಯ ನಿರನ್ನೇ ಖಾಲಿ ಮಾಡುತ್ತಿದ್ದ ಕ್ರಮವನ್ನು ಇದೀಗ ತಡೆಹಿಡಿಯಲಾಗಿದೆ.
ಕೆರೆ ನೀರನ್ನು ಖಾಲಿ ಮಾಡುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ಗದಗ ಎಸಿ ಮಂಜುನಾಥ್, ತಹಶೀಲ್ದಾರ್ ಶ್ರೀನಿವಾಸ ಮೂರ್ತಿ, ತಾಲೂಕ್ ಪಂಚಾಯತ್ ಮುಖ್ಯಾಧಿಕಾರಿ ಜಿನಗಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕೆರೆ ನೀರು ಹೊರಹಾಕುವುದನ್ನ ಸ್ಥಗಿತಗೊಳಿಸಿದ್ದಾರೆ.
ಏನಿದು ಘಟನೆ?
ಗದಗ ಜಿಲ್ಲೆಯ ಹುಯಿಲಗೋಳ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ, ಕುಡಿಯುವ ನೀರಿನ ಕೆರೆಗೆ ಹಾರಿ ಸುಮಾರು 60 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆ ಕೆರೆಯಲ್ಲಿ ಮೃತ ಪಟ್ಟಿರುವುದರಿಂದ ಕೆರೆ ನೀರು ಮೈಲಿಗೆ ಆಗಿದೆ ಎಂಬ ಮನೋಭಾವ ಸ್ಥಳಿಯರಲ್ಲಿ ಮೂಡಿದ್ದು, ಈ ನೀರನ್ನು ಈಗ ಯಾರೂ ಉಪಯೋಗಿಸುತ್ತಿಲ್ಲ. ಹೀಗಾಗಿ ಮೋಟಾರ್ ಬಳಸಿ ಕೆರೆ ಖಾಲಿ ಮಾಡುತ್ತಿದ್ದರು. ಇದರಿಂದ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹುಯಿಲಗೋಳ ಗ್ರಾಮದಲ್ಲಿ ಕುಡಿಯುವ ನೀರಿನ ಜಲಕ್ಷಾಮ ಎದುರಾಗಿದೆ. ಸ್ಥಳೀಯ ಮುಖಂಡರು, ಗ್ರಾಮ ಪಂಚಾಯತ ಸದಸ್ಯರು ಈ ಕೆರೆ ಖಾಲಿ ಮಾಡಲು ತೀರ್ಮಾನಿಸಿರುವುದಾಗಿ ಗ್ರಾ.ಪಂ ಸದಸ್ಯ ಬಸವರಾಜ್ ಹೇಳಿದ್ದರು.
ಸದ್ಯ ಗ್ರಾಮಸ್ಥರು ಗ್ರಾಮದ ಇನ್ನೊಂದು ಚಿಕ್ಕ ಕೆರೆ ಮತ್ತು ಅಕ್ಕಪಕ್ಕದ ಗ್ರಾಮದ ಕೆರೆಗಳ ಮೊರೆಹೋಗಿದ್ದರು. ಮುಂಬರುವ ದಿನಗಳನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಗ್ರಾಮದ ಜನರನ್ನು ಕಾಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews