ಚಿಕ್ಕಮಗಳೂರು: ಸ್ವಾತಂತ್ರ್ಯ ಬಂದಾಗಿನಿಂದಲೂ ಓಡಾಡೋದಕ್ಕೆ ರಸ್ತೆ ಇಲ್ಲದೆ ಹಳ್ಳದಲ್ಲೇ ಓಡಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಐದಳ್ಳಿ ಗ್ರಾಮದಲ್ಲಿ ಪಬ್ಲಿಕ್ ಟಿವಿಯ ವರದಿಯಿಂದ ಸೇತುವೆ ನಿರ್ಮಾಣವಾಗುತ್ತಿದ್ದ ಹಿನ್ನೆಲೆ ಮಲೆನಾಡಿಗರು ವಾಹಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಸೇರಿದಂತೆ ದುರ್ಗಾ, ಬೆಟ್ಟದಹಳ್ಳಿ, ಗಡಬನಹಳ್ಳಿ, ನರೂಡಿ ಗ್ರಾಮಕ್ಕೆ ಸೂಕ್ತವಾದ ರಸ್ತೆ ಇರಲಿಲ್ಲ. ರಸ್ತೆ ಇದ್ದರೂ ಅರ್ಧ-ಒಂದು ಕಿ.ಮೀ. ದೂರದ ರಾಜ್ಯ ಹೆದ್ದಾರಿ ರಸ್ತೆಗೆ ಸುಮಾರು ಐದಾರು ಕಿ.ಮೀ. ಸುತ್ತಿಬಳಸಿ ಬರಬೇಕಿತ್ತು. ಹಾಗಾಗಿ, ಈ ಗ್ರಾಮಗಳ ಜನರು ಕಣತಿ ಸಮೀಪದ ಆನೆಬಿದ್ದ ಹಳ್ಳವನ್ನೇ ಆಶ್ರಯಿಸಿಕೊಂಡಿದ್ದರು. ಮಳೆಗಾಲದಲ್ಲಿ ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಪರದಾಡುತ್ತಿದ್ದರು. ಮಳೆಗಾಲದಲ್ಲಿ ಮಕ್ಕಳು ತಿಂಗಳುಗಟ್ಟಲೇ ಶಾಲೆಗೆ ಹೋಗುತ್ತಿರಲಿಲ್ಲ. ಮಳೆಗಾದಲ್ಲಿ ಹಳ್ಳ ಕಡಿಮೆ ಇದ್ದರೆ ದೊಡ್ಡವರು ಬರುವವರೆಗೂ ಮಕ್ಕಳು ದಡದಲ್ಲಿ ನಿಂತು ಕಾಯುತ್ತಿದ್ದರು. ಇದನ್ನೂ ಓದಿ: ‘ತವಾ ಮಸಾಲಾ ಬೆಂಡೆಕಾಯಿ’ ಮಾಡುವ ಸೂಪರ್ ರೆಸಿಪಿ
ನೀರಿನ ಪ್ರಮಾಣ ಸ್ವಲ್ಪ ಕಡಿಮೆ ಇದ್ದರೆ ಮಕ್ಕಳೇ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಹಳ್ಳ ದಾಟುತ್ತಿದ್ದರು. ಕೆಲ ಯುವಕರು ನೀರಿನ ಅಬ್ಬರ ಹೆಚ್ಚಾಗಿದ್ದಾಗಲೂ ದಾಟಲು ಹೋಗಿ ಕೊಚ್ಚಿ ಹೋಗಿ ಮರದ ಟೊಂಗೆ, ಕಲ್ಲು ಹಿಡಿದು ಬದುಕಿದ್ದಾರೆ. ಕೆಲವರು ಈಜಿ ದಡ ಸೇರಿದ್ದಾರೆ. ಬೆಳಗ್ಗೆ-ಮಧ್ಯಾಹ್ನ-ರಾತ್ರಿ ಎನ್ನುವಂತಿಲ್ಲ. ಹಳ್ಳಿಯಲ್ಲಿ ಯಾರದ್ದಾದರೂ ಆರೋಗ್ಯ ಹದಗೆಟ್ಟರೆ ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಜೋಳಿಗೆ ಕಟ್ಟಿಕೊಂಡು ಹೊತ್ತುಕೊಂಡು ಬರಬೇಕಿತ್ತು. ಇಲ್ಲಿನ ಜನ ಕಳೆದ ಎರಡು, ಮೂರು ದಶಕಗಳಿಂದ ಆನೆಬಿದ್ದ ಹಳ್ಳಕ್ಕೆ ಒಂದು ಸೇತುವೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಹಾಗೂ ಜನನಾಯಕರು ಹಳ್ಳಿಗರಿಗೆ ಅಂಗೈಯಲ್ಲಿ ಆಕಾಶ ತೋರಿಸಿದ್ದೇ ಹೆಚ್ಚು. ಇದನ್ನೂ ಓದಿ: ದಿನಗೂಲಿ ಮಕ್ಕಳಿಗಾಗಿ ಬಿಬಿಎಂಪಿಯಿಂದ ರಾತ್ರಿ ಸ್ಕೂಲ್
ಆಧುನಿಕ ಪ್ರಪಂಚದಲ್ಲೂ ಇಲ್ಲಿನ ಜನ ಅನಾಗರಿಕರಂತೆ ಬದುಕುತ್ತಿದ್ದರು. ಈ ಗ್ರಾಮಗಳ ಸಮಸ್ಯೆಗಳ ಬಗ್ಗೆ ಪಬ್ಲಿಕ್ ಟಿವಿ ಸವಿಸ್ತಾರವಾಗಿ ಸುದ್ದಿ ಮಾಡಿತ್ತು. ಪಬ್ಲಿಕ್ ಟಿವಿಯ ಸುದ್ದಿ ನೋಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಳ್ಳಿಗೆ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಇದೀಗ ಸರ್ಕಾರದಿಂದ 90 ಲಕ್ಷ ಹಣ ಬಿಡುಗಡೆ ಮಾಡಿಸಿ ಕೆಲಸ ಕೂಡ ಆರಂಭವಾಗಿದೆ. ಈಗಾಗಲೇ ಸುಮಾರು ಐದಾರು ಅಡಿಯಷ್ಟು ಪಿಲ್ಲರ್ ನಿರ್ಮಾಣವಾಗಿದ್ದು ಒಂದೂವರೆ ಅಥವಾ ಎರಡು ತಿಂಗಳಲ್ಲಿ ಈ ಗ್ರಾಮಗಳಿಗೆ ಸೇತುವೆ ನಿರ್ಮಾಣವಾಗಲಿದೆ. ಕಳೆದ ಏಳೆಂಟು ದಶಕದ ಹಳ್ಳದ ಬದುಕಿಗೆ ಮುಕ್ತಿ ಸಿಗಲಿದೆ. ಹಾಗಾಗಿ, ಮಲೆನಾಡಿಗರು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಪಬ್ಲಿಕ್ ಟಿವಿಗೆ ನಾವು ಋಣಿ ಎಂದಿದ್ದಾರೆ.