ಬೆಂಗಳೂರು: ಕರ್ನಾಟಕ ಲೋಕಸಭಾ ಚುನಾವಣೆಗೆ (Lok Sabha Election 2024) ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ದೇಶದ ಗಮನ ಸೆಳೆಯುವಂತಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಸಂಸದ ಡಿ.ಕೆ.ಸುರೇಶ್ (D.K.Suresh) ವಿರುದ್ಧ ವೈದ್ಯಲೋಕದಲ್ಲಿ ಖ್ಯಾತನಾಮರಾದ ಡಾ. ಸಿ.ಎನ್.ಮಂಜುನಾಥ್ (Dr. C.N.Manjunath) ಕಣಕ್ಕಿಳಿದಿದ್ದಾರೆ. ಜಿದ್ದಾಜಿದ್ದಿ ಕಣದ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ.
ಚುನಾವಣಾ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯ ‘ಹಾಟ್ ಸೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಬಲ ವ್ಯಕ್ತಿ ನನ್ನ ವಿರುದ್ಧ ಸ್ಪರ್ಧಿಸುತ್ತಾರೆ ಅಂದುಕೊಂಡಿದ್ದೆ. ಆದರೆ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ್ದಾರೆ. ಇಡೀ ಕ್ಷೇತ್ರದ ಜನರ ಮಿಡಿತ ನನಗೆ ಗೊತ್ತು. ಮಂಜುನಾಥ್ ಅವರ ಮಿಡಿತ ನನಗೆ ಬೇಕಾಗಿಲ್ಲ. ಅವರನ್ನ ನಾನು ವೈದ್ಯರಾಗಿ ನೋಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಮಗ-ಮಗಳು, ಸೊಸೆ-ಅಳಿಯ, ಅಣ್ಣ ಎಲ್ಲಾ ಇದ್ದಾರೆ; ಕುಟುಂಬ ರಾಜಕಾರಣ ಆರೋಪಕ್ಕೆ ಡಾ.ಮಂಜುನಾಥ್ ತಿರುಗೇಟು
ರಾಜಕೀಯ ಬಂದಾದ ಮೇಲೆ ಚುನಾವಣೆಗಳು ಸಹಜ. ಯಾವತ್ತಿನಿಂದ ಜನರು ನನ್ನನ್ನು ಆಶೀರ್ವದಿಸಿ ಕಳುಹಿಸಿಕೊಟ್ಟರೋ ಅವತ್ತಿನಿಂದ ಜನರ ಸೇವೆಯಲ್ಲಿದ್ದೇನೆ. ಹೀಗಾಗಿ ನನಗೆ ಚುನಾವಣೆ ಹೊಸದೇನಲ್ಲ. ಚುನಾವಣೆ ಕಾವು ಏರಿದೆ ಅಂತ ನನಗೆ ಅನಿಸುತ್ತಿಲ್ಲ. ಚುನಾವಣೆ ಇದೆ ಅಂತ ನಾನು ತಯಾರಿ ಆಗಲ್ಲ. ಗೆದ್ದಾದ ಮೇಲೆ ಅವತ್ತಿನಿಂದ ನನ್ನ ಕಾರ್ಯಕ್ರಮ ಪ್ರಾರಂಭವಾಗುತ್ತೆ. ಒಬ್ಬ ಅಭ್ಯರ್ಥಿಯಾಗಿ ನನ್ನ ಕೆಲಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನಷ್ಟೇ ಮಾಡ್ತೀನಿ ಎಂದು ಹೇಳಿದರು.
ಡಿ.ಕೆ.ಸುರೇಶ್ ಸೈಲೆಂಟಾಗಿದ್ದಾರೆ ಅಂತ ಏನು ಇಲ್ಲ. ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಕಾದು ನೋಡುತ್ತಿದ್ದೇನೆ. ನಾನು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಜನರ ವಿಶ್ವಾಸ ಗಳಿಸಿದ್ದೇನೆ. ಕ್ಷೇತ್ರದ ಉದ್ದಗಲಕ್ಕೂ ನನ್ನದೇ ರೀತಿಯಲ್ಲಿ ರೈತರ ಸಮಸ್ಯೆ, ಯುವಕರು, ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದೇನೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಒಂದಷ್ಟು ಕೆಲಸಕಾರ್ಯ ಮಾಡಿದ ತೃಪ್ತಿ ನನಗಿದೆ. ಆ ನಿಟ್ಟಿನಲ್ಲಿ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡುವಂತೆ ಕೇಳುತ್ತಿದ್ದೇನೆ ಎಂದು ಮಾತನಾಡಿದರು. ಇದನ್ನೂ ಓದಿ: ನಾವು ಗಂಡಸರನ್ನ ನಂಬಲ್ಲ, ಹೆಣ್ಣುಮಕ್ಕಳನ್ನ ನಂಬುತ್ತೇವೆ: ಡಿಕೆಶಿ
2013 ರಲ್ಲಿ ದೇವೇಗೌಡರ ಸೊಸೆ ವಿರುದ್ಧ ಸ್ಪರ್ಧಿಸಿ ಗೆಲುವು, 2024 ರಲ್ಲಿ ದೇವೇಗೌಡರ ಅಳಿಯನ ಜೊತೆ ಫೈಟ್ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್, ಇದು ಹೊಸದಲ್ಲ. 1985 ರಿಂದಲೂ ನಡೆದುಕೊಂಡು ಬಂದಿರುವಂಥದ್ದು. ದೇವೇಗೌಡರ ಕುಟುಂಬದ ಜೊತೆಗಿನ ಜಿದ್ದಾಜಿದ್ದಿ ನಿರೀಕ್ಷಿಸಿರಲಿಲ್ಲ. ಇದನ್ನ ಅವರು ಮುಂದುವರಿಸುತ್ತಿದ್ದಾರೆ. ಬಹಳ ಸಂತೋಷದಿಂದ ಅದನ್ನು ಸ್ವಾಗತಿಸುತ್ತೇನೆ ಎಂದರು.