ಕೋಲಾರ: ಸಾವಿರಾರು ಅಡಿ ಬೋರ್ವೆಲ್ ಕೊರೆದ್ರೂ ಜೀವ ಜಲ ಸಿಗದ ಕೋಲಾರದಲ್ಲಿ ರೈತರೊಬ್ರು ಬೋರ್ವೆಲ್, ಕರೆಂಟ್ ಯಾವುದೂ ಇಲ್ಲದೆ ಕೃಷಿಯಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಬರಡು ಭೂಮಿಯಲ್ಲಿ ವ್ಯವಸಾಯ ಮಾಡಿ, ಬರದಲ್ಲೂ ಹಚ್ಚ ಹಸುರಿನ ಬೆಳೆ ಬೆಳೆದು ಮಾದರಿ ಕೃಷಿಕರಾಗಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಂಪುರ ಗ್ರಾಮದ ಪ್ರಗತಿಪರ ರೈತ ಅಶೋಕ್ಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 16 ವರ್ಷಗಳಿಂದ ಕೃಷಿಕರಾಗಿದ್ದಾರೆ. 13 ವರ್ಷಗಳ ಕಾಲ ಶ್ರೀನಿವಾಸಪುರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಂಪೂರ್ಣ ಕೃಷಿಕನಾಗಬೇಕು ಅಂತ ನಿರ್ಧರಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅಶೋಕ್ಕುಮಾರ್, ಪಿತ್ರಾರ್ಜಿತ 70 ಎಕರೆ ಭೂಮಿಯಲ್ಲಿ ಸಾವಯವ ಹಾಗೂ ಸಹಜ ಕೃಷಿ ಮಾಡುತ್ತಿದ್ದಾರೆ. ತಮ್ಮ ಭೂಮಿಯನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡು ಕೃಷಿ ಕಾರ್ಯಕ್ಕೆ ಇಳಿದಿದ್ದಾರೆ.
ಜಮೀನಿನಲ್ಲಿ ಐದಾರು ಕೃಷಿ ಹೊಂಡ, ಇಂಗುಗುಂಡಿ ಮೂಲಕ ಕೃಷಿ ಮಾಡ್ತಿದ್ದಾರೆ. ಒಂದು ಬೋರ್ವೆಲ್ ಸಹ ಹಾಕಿಸದೆ, ವಿದ್ಯುತ್ ಕೂಡಾ ಬಳಸದೆ, ಕೇವಲ ಮಳೆಯಾಶ್ರಿತ ಸಹಜ ಕೃಷಿ ಮಾಡ್ತಿರೋದು ಇವರ ವಿಶೇಷತೆ. ಕೃಷಿಯ ಜೊತೆಗೂ ಹೈನುಗಾರಿಕೆ, ಮೀನುಗಾರಿಕೆ ಕೂಡ ಮಾಡ್ತಿದ್ದಾರೆ. ತಮ್ಮದೇ ರೀತಿಯ ವಿಧಾನದಲ್ಲಿ ಅಶೋಕ್ ಕುಮಾರ್ ಕೃಷಿ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಜೊತೆ ಸುಂದರ ಬದುಕು ಕಟ್ಟಿಕೊಂಡಿದ್ದಾರೆ.